ಕಾಂಗ್ರೆಸ್ ಕೊನೆಗೂ ಅಳೆದು ತೂಗಿ 22 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ತಲೆದೋರಿದೆ. ಬೂದಿ ಮುಚ್ಚಿದ ಕೆಂಡದಂತಿರುವ ನಾಯಕರ ಮುನಿಸು ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಚಕಾರ ತರುವುದರಲ್ಲಿ ಅನುಮಾನವಿಲ್ಲ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ದೊರಕಿರುವುದರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಿರುವುದರಿಂದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಶಾಸಕ ಸುಧಾಕರ್ ಕೆಂಡಾಮಂಡಲರಾಗಿದ್ದಾರೆ.
ಮೈಸೂರಿನಲ್ಲಿ ಎಚ್. ವಿಶ್ವನಾಥ್ಗೆ ಟಿಕೆಟ್ ನೀಡಿರುವುದು ಮಾದೇಗೌಡರನ್ನು ಕೆರಳಿಸಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ದೊರೆತಿದ್ದರೂ ತಾವು ಬಯಸಿದ ಸೆಂಟ್ರಲ್ ಕ್ಷೇತ್ರದಲ್ಲಿ ಟಿಕೆಟ್ ದೊರೆಯದ ಬಗ್ಗೆ ಜಾಫರ್ ಷರೀಫ್ ಬೇಸರಗೊಂಡಿದ್ದಾರೆ. ಕೊಪ್ಪಳದಲ್ಲಿ ಬಸವರಾಜರಾಯರೆಡ್ಡಿ ಟಿಕೆಟ್ ಪಡೆದಿರುವುದರಿಂದ ಹಾಲಿ ಸಂಸದ ವಿರೂಪಾಕ್ಷಪ್ಪ ವ್ಯಗ್ರಗೊಂಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ಆರಂಭಿಸುವಂತೆ ಮಾಜಿ ಶಾಸಕ ಎಂ.ಆರ್. ಸೀತಾರಾಂಗೆ ಪಕ್ಷ ಸೂಚನೆ ನೀಡಿತ್ತು. ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ವೀರಪ್ಪ ಮೊಯ್ಲಿ ಕೊನೆ ಕ್ಷಣದಲ್ಲಿ ಸ್ಪರ್ಧಿಸಲು ಮುಂದಾಗಿರುವುದು ಸೀತಾರಾಂ ಅವರಿಗೆ ಅಸಮಾಧಾನ ತಂದಿದೆ. ಕಾರವಾರದಲ್ಲಿ ಮಾರ್ಗರೆಟ್ ಆಳ್ವ ಟಿಕೆಟ್ಗಾಗಿ ಹರಸಾಹಸ ಮಾಡುತ್ತಿರುವುದರಿಂದ ತಮ್ಮ ಪುತ್ರನಿಗೆ ಟಿಕೆಟ್ ದೊರೆತೇಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆತಂಕದಲ್ಲಿದ್ದಾರೆ. ಹೈಕಮಾಂಡ್ ಮಾರ್ಗರೇಟ್ ಅವರ ಕೈ ಹಿಡಿದರೆ ಅನಿವಾರ್ಯವಾಗಿ ದೇಶಪಾಂಡೆ ಮಾರ್ಗರೇಟ್ ಪರ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಈಗಾಗಲೇ 22ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಸಮಾಧಾನದ ಹೊಗೆ ಭುಗಿಲೇಳತೊಡಗಿದೆ. |