ಹಿಂದುತ್ವದ ವಿರುದ್ಧ ಮಾತನಾಡುವವರ ಕತ್ತು ಕತ್ತರಿಸಬೇಕು ಎಂಬ ಹೇಳಿಕೆಗೆ ಬದ್ಧ ಎಂದು ಹೇಳಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಅದಕ್ಕಾಗಿ ಜೈಲುಕಂಬಿ ಎಣಿಸಲು ಸಿದ್ದ ಎಂಬುದಾಗಿ ಹೇಳಿದ್ದಾರೆ.
ಹಿಂದುತ್ವವಾದಿಗಳ ಕೈ ಕತ್ತರಿಸಬೇಕು ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರೇಣುಕಾಚಾರ್ಯ, ಹಿಂದುತ್ವದ ವಿರುದ್ಧ ಮಾತನಾಡುವವರ ತಲೆ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದರು.
ನಾನು ಯಾವುದೇ ಧರ್ಮ ಅಥವಾ ಸಮಾಜದ ವಿರುದ್ಧ ಮಾತನಾಡುವ ಕೆಲಸ ಮಾಡಿಲ್ಲ. ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರ ಬಗ್ಗೆ ಅಪಾರವಾದ ಪ್ರೀತಿ, ವಿಶ್ವಾಸವಿದೆ. ಆದರೆ ಚುನಾವಣಾ ಆಯೋಗ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸದೇ ಚುನಾವಣಾ ಆಯೋಗ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಗೋಡು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕತ್ತರಿಸಬೇಕು ಎಂದು ಹೇಳಿದ್ದಾರೆ. ಅವರ ಹೇಳಿಕೆ ಕಂಡು ನೋವಾಗಿದೆ. ಈ ಹಿನ್ನೆಲೆಯಲ್ಲಿ ತಾವು ಹಿಂದುಗಳ ಕೈ ಕತ್ತರಿಸುವವರ ತಲೆ ಕತ್ತರಿಸಬೇಕು ಎಂದು ಹೇಳಿದ್ದೇನೆ. ಈ ಹೇಳಿಗೆ ಹೇಗೆ ಕೋಮು ಭಾವನೆ ಕೆರಳಿಸುತ್ತದೆ ಎಂದು ಪ್ರಶ್ನಿಸಿದರು.
ಯಾವುದೇ ಪಕ್ಷದ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತ ತಿಳಿಸಿದ್ದರು. ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ ಬೆನ್ನಲ್ಲೇ ರೇಣುಕಾಚಾರ್ಯ ತನ್ನ ಹೇಳಿಕೆ ಸಮರ್ಥಿಸಿಕೊಂಡು, ಜೈಲಿಗೆ ಹೋಗಲು ಸಿದ್ದ ಎಂಬುದಾಗಿ ತಿಳಿಸಿದ್ದರು. |