ರಾಜ್ಯದ ಹಿತ ಕಾಪಾಡುವ ತಾಕತ್ತು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಇಲ್ಲ. ಜೆಡಿಎಸ್ನ ಎಲ್ಲಾ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಿದರೆ ನಾವು ರಾಜ್ಯದ ಹಿತ ಕಾಪಾಡಿ ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಾಂಡವಪುರ ತಾಲೂಕಿನ ಮೇಲುಕೋಟೆ ಆದಿಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಭಾಷಣ ಮಾಡಿದ ಅವರು, ಕಾವೇರಿ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಅವಕಾಶವೇ ಇಲ್ಲದಂತಹ ಪರಿಸ್ಥಿತಿಯನ್ನು ರಾಷ್ಟ್ರೀಯ ಪಕ್ಷಗಳು ಸೃಷ್ಟಿಸಿವೆ. ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೇಂದ್ರ ಸರ್ಕಾರದ ಬಗ್ಗೆ ನೈತಿಕ ಹೋರಾಟ ಮಾಡಲು ಆ ಪಕ್ಷಗಳು ಮತ್ತು ನಾಯಕರು ವಿಫಲವಾಗಿವೆ ಎಂದರು.
ಈ ಬಾರಿಯ ಚುನಾವಣೆ ಜೆಡಿಎಸ್ಗೆ ಸತ್ವ ಪರೀಕ್ಷೆಯಾಗಲಿದೆ. ಅದಕ್ಕೆ ಕ್ಷೇತ್ರದ ಜನತೆ ಆಶೀರ್ವಾದದ ಮೂಲಕ ಅಭ್ಯರ್ಥಿ ಚಲುವರಾಯ ಸ್ವಾಮಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಮಂಡ್ಯ ದೇವೇಗೌಡರ ತವರು ಜಿಲ್ಲೆ. ಕಷ್ಟ ಕಾಲದಿಂದ ಜೆಡಿಎಸ್ ಪಕ್ಷವನ್ನು ಬೆಳೆಸಿಕೊಂಡು ಬಂದಿದೆ. ಇನ್ನು ಮುಂದೆಯೂ ಪಕ್ಷ ಸದೃಢವಾಗಿ ಬೆಳೆಯಲು ಜನರ ಆಶೀರ್ವಾದ ಅಗತ್ಯ ಎಂದು ತಿಳಿಸಿದರು. |