ತಾಯಿ ಮಾತಿಗೆ ಗೌರವ ಕೊಟ್ಟು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧದ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ನೈಸ್ ಸಂಸ್ಥೆಯ ಅಶೋಕ್ ಖೇಣಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ವಿರುದ್ಧ ಹಾಸನದಲ್ಲಿ ಸ್ಪರ್ಧೆ ನಡೆಸಲು ಈಗಲೂ ಸಿದ್ಧ. ಆದರೆ ನನ್ನ ತಾಯಿ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿದರು.
ಅಲ್ಲದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ವಿರೋಧಿಸಿ ಉಪವಾಸ ನಡೆಸುವ ಬೆದರಿಕೆ ಹಾಕಿದ್ದಾರೆ. ತಾಯಿಯ ಮೇಲಿನ ಗೌರವದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಹೇಳಿದರು.
ಈ ಚುನಾವಣೆಯಲ್ಲಿ ತಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಜನತಾ ದಳವೂ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಒಳ್ಳೆಯವರಿದ್ದಾರೆ. ಒಳ್ಳೆಯ ಜನರಿಗೆ ಮತ ಚಲಾಯಿಸಿ ಯಾರೇ ಹಣ ಕೊಟ್ಟರೂ ತೆಗೆದುಕೊಳ್ಳಿ. ಆದರೆ ಹಣ ನೀಡದವರಿಗೆ ಮತಹಾಕಿ ಎಂದು ಹೇಳಿದರು.
ನೈಸ್ ರಸ್ತೆಯ ಕಾಮಗಾರಿಗೆ ರಾಜ್ಯದ ಸರ್ಕಾರ ಸಹಕಾರ ನೀಡಿದರೆ ಬೇಗ ಮುಗಿಸುತ್ತದೆ. ಮೈಸೂರಿನಲ್ಲಿಯೂ ಇನ್ನೂ ಜಾಗವನ್ನೇ ನೀಡಿಲ್ಲ. ತಕ್ಷಣವೇ ಜಾಗ ನೀಡಿದರೆ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. |