ಭಾರತ ಕೇವಲ ಹಿಂದೂಗಳ ದೇಶವಲ್ಲ, ಇಲ್ಲಿ ಎಲ್ಲಾ ಜಾತಿಯವರಿಗೂ ಬದುಕಲು ಅವಕಾಶವಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಿಂದುತ್ವವನ್ನು ಖಂಡಿಸುತ್ತೇನೆ, ನನ್ನ ತಲೆಯನ್ನು ಕತ್ತರಿಸುತ್ತಾರೋ ಅಂತ ನೋಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುತ್ವ ವಿರೋಧಿಸುವವರ ಕೈ, ತಲೆ ಕತ್ತರಿಸಿ, ತಿಥಿ ಮಾಡು ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯ ಯಾವ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಲ್ಲ ಎಂದು ಗುಡುಗಿದ ಅವರು, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ, ದೇಶದ ಕಾನೂನಿಗೆ ಅಗೌರವ ತೋರುವ ಯಾರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲ ಎಂದರು.
ಭಾರತ ಕೇವಲ ಹಿಂದೂಗಳ ದೇಶವಲ್ಲ. ಭಾರತ ಕೇವಲ ಹಿಂದುಗಳ ದೇಶವಲ್ಲ, ಮುಸ್ಲಿಂ, ಸಿಖ್, ಕ್ರೈಸ್ತ ಹೀಗೆ ನಾನಾ ಧರ್ಮದವರು ವಾಸಿಸುತ್ತಿದ್ದಾರೆ. ಆದರೆ ಚುನಾವಣೆಗಾಗಿ ಜನರ ಶಾಂತಿಗೆ ಭಂಗ ತರುವ ಮತ್ತು ಕೋಮುಗಲಭೆ ಉಂಟು ಮಾಡುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೇಣುಕಾಚಾರ್ಯ ಎಂಬ ಶಾಸಕ ಹಿಂದುತ್ವ ಖಂಡಿಸಿದರೆ ತಲೆ ಕತ್ತರಿಸುತ್ತೇನೆ, ಕೈ ಕತ್ತರಿಸುತ್ತೇನೆ ಎನ್ನುತ್ತಾರೆ. ನಾನು ಈಗ ಹಿಂದುತ್ವ ಖಂಡಿಸುತ್ತೇನೆ ಯಾರು ಬಂದು ತಲೆ ಕತ್ತರಿಸುತ್ತಾರೋ ನೋಡುತ್ತೇನೆ ಎಂದ ಸಿದ್ದರಾಮಯ್ಯ , ಶಾಸಕ ಮತ್ತು ಸಂಸನಾದ ಕೂಡಲೇ ಏನು ಬೇಕಾದರೂ ಮಾತನಾಡಬಹುದು ಎಂಬ ಭ್ರಮೆ ಬಿಜೆಪಿಯವರಿಗಿದೆ ಎಂದು ಕಟುವಾಗಿ ಟೀಕಿಸಿದರು.
|