ವಿವಿಧ ಪಕ್ಷಗಳ ನಾಯಕರ ದೌರ್ಬಲ್ಯಗಳನ್ನು ನೆಪವಾಗಿಟ್ಟುಕೊಂಡು ಅವರನ್ನು ಹೆದರಿಸಿ-ಬೆದರಿಸಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಸೇಡಿನ ರಾಜಕಾರಣ ನಡೆಸುತ್ತಿದೆ. ಪಕ್ಷ ಸೇರದಿದ್ದಲ್ಲಿ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಸಿ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ದೂರಿದರು.
ಆಪರೇಷನ್ ಕಮಲ ಹಾಗೂ ರಾಜ್ಯದಲ್ಲಿನ 10 ತಿಂಗಳ ಬಿಜೆಪಿಯ ಭ್ರಷ್ಟ ಆಡಳಿತದಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದ್ದು, ಈ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸ್ವಾಭಿಮಾನಿ ಬೆಂಬಲ ಬೇಡ: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷಗಳೊಂದಿಗೆ ಕೈ ಜೋಡಿಸಿರುವ ಸ್ವಾಭಿಮಾನಿ ವೇದಿಕೆ ನಾಯಕರು ಲೋಕಸಭೆಯಲ್ಲಿ ಎಲ್.ಕೆ.ಅಡ್ವಾಣಿ ಪರ ಕೈ ಎತ್ತಿ ಬೆಂಬಲ ಸೂಚಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.
ಬಿಜೆಪಿಯನ್ನು ಸೋಲಿಸುವುದೇ ತಮ್ಮ ಗುರಿ ಎನ್ನುತ್ತಿರುವ ಸ್ವಾಭಿಮಾನಿ ವೇದಿಕೆಯ ಬೆಂಬಲದ ಅನಿವಾರ್ಯತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿಗೆ ಬರಲಾರದು ಎಂದರು. |