ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಕೆಲವು ನಿಬಂಧನೆಗಳನ್ನು ಹೇರಬೇಕೆಂದಿರುವ ಚಿತ್ರದುರ್ಗ ಬೃಹನ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು, ರಾಜಕೀಯದಿಒಂದ ಮಠಾಧೀಶರು ದೂರವಿರಬೇಕು ಎಂದು ಹಿತವಚನ ನುಡಿದರು.
ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗೆ ಒಂದೇ ಮಗು ಇರಬೇಕು. ವಾರ್ಷಿಕ 1 ಕೋಟಿ ರೂ. ಆದಾಯವಿರುವ ಸುಶಿಕ್ಷಿತ ಅಭ್ಯರ್ಥಿ ಸ್ಪರ್ಧಿಸಬೇಕೆಂಬ ನಿಯಮವನ್ನು ಚುನಾವಣಾ ಆಯೋಗ ರೂಪಿಸಬೇಕು ಎಂದು ಹೇಳಿದರು.
ಪ್ರಸ್ತುತ ರಾಜಕಾರಣದಲ್ಲಿ ಮೋಸ, ವಂಚನೆ, ಗೂಂಡಾಗಿರಿ ಮಾಡುವಂಥವರು ಮಾತ್ರ ರಾಜಕೀಯಕ್ಕೆ ಬರುತ್ತಿರುವುದರಿಂದ ಅದೇ ಅವರ ಅರ್ಹತೆಗಳಾಗಿವೆ. ಹಾಗಾಗಿ ಗುಣಮಟ್ಟದ ರಾಜಕಾರಣಿಗಳು ಚುನಾವಣೆಯಿಂದ ದೂರ ಉಳಿಯುವಂತಾಗಿದೆ ಎಂದರು.
ಚುನಾವಣೆಯಲ್ಲಿ ಅಭ್ಯರ್ಥಿಗೆ 2 ಅವಧಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು. ಬಿಸಿಯೂಟ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸುತ್ತೂರು ಮಠ ಹಾಗೂ ಇಸ್ಕಾನ್ಗೆ ವಹಿಸಕೊಟ್ಟಿದ್ದರು. ಅವು ಇಂದು ಸಫಲಕಂಡಿವೆ. ಅಂತಹ ಯೋಜನೆಗಳನ್ನು ಜಾರಿಗೆ ತರಬೇಕೆಂದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಠಾಧಿಪತಿಗಳು ಪ್ರೋತ್ಸಾಹಿಸಬೇಕೆ ಹೊರತು ಅವರಿಗೆ ಮತ ಹಾಕಿ ಇವರಿಗೆ ಮತಹಾಕಿ ಎನ್ನಬಾರದು ಎಂದರು. |