ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಇತ್ತೀಚೆಗೆ ಟೀಕಾ ಪ್ರಹಾರ ನಡೆಸಿರುವ ಬಂಗಾರಪ್ಪ ಹತಾಶೆಯಿಂದ ಬಳಲುತ್ತಿದ್ದಾರೆ. ಸೋಲಿನ ಭೀತಿ ಅವರಿಗೆ ಬಲವಾಗಿ ಅವರಿಸಿದೆ. ಮಾಜಿ ಮುಖ್ಯಮಂತ್ರಿಯಾದ ಅವರ ಬಗ್ಗೆ ನನಗೆ ಗೌರವವಿದೆ ಎಂದರು.
ಲಂಬಾಣಿ ಮತದಾರರ ಗುರುತಿನ ಚೀಟಿಯನ್ನು ಬಿಜೆಪಿಯವರು ಖರೀದಿಸುತ್ತಿದ್ದಾರೆ ಎನ್ನುವ ಬಂಗಾರಪ್ಪ ಅವರ ಆರೋಪ ಸರಿಯಲ್ಲ. ನಮಗೆ ಲಂಬಾಣಿ ಜನಾಂಗದ ಬಗ್ಗೆ ಗೌರವ ಇದೆ. ನಮ್ಮ ಸರ್ಕಾರ ಲಂಬಾಣಿ ತಾಂಡಾಗಳ ಅಭಿವೃದ್ದಿಗೆ ಹೆಚ್ಚಿನ ಹಣ ನೀಡಿದೆ. ಬೆಂಗಳೂರಿನಲ್ಲಿ ಸೇವಾಲಾಲ್ ಭವನ ನಿರ್ಮಿಸಿದ್ದೇವೆ. ಇದು ಅವರ ಕಣ್ಣು ಕುಕ್ಕುತ್ತಿದೆ. ಆ ವರ್ಗದ ಬಗ್ಗೆ ನಮ್ಮ ಕಳಕಳಿಯನ್ನು ಬಂಗಾರಪ್ಪ ಪ್ರಶ್ನಿಸುವುದು ಬೇಡ ಎಂದು ಹೇಳಿದರು.
ಆಕಸ್ಮಾತ್ ಯಾರಾದರೂ ಗುರುತಿನ ಚೀಟಿಯನ್ನು ಖರೀದಿಸಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದ ಅವರು, ರಾಯಚೂರು ಅಭ್ಯರ್ಥಿ ಬದಲಾವಣೆಯಲ್ಲಿ ನನ್ನ ಅಥವಾ ಪಕ್ಷದ ಅಧ್ಯಕ್ಷರ ಪಾತ್ರವಿಲ್ಲ. ಜಾತಿ ಪ್ರಮಾಣ ಪತ್ರದ ಗೊಂದಲ ಇದಕ್ಕೆ ಕಾರಣ ಎಂದು ಸಮಜಾಯಿಷಿಕೆ ನೀಡಿದರು.
|