ಕಾಂಗ್ರೆಸ್ ಪಕ್ಷದ ಹಾಲಿ ನಾಯಕರಿಗೆ ದೇಶದ ಹಿತಾಸಕ್ತಿ ಬಗ್ಗೆ ಗಮನ ನೀಡುವಷ್ಟು ಪುರುಸೊತ್ತಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಇತಿಹಾಸ, ತ್ಯಾಗ-ಬಲಿದಾನ ಗೊತ್ತಿಲ್ಲದವರು ಆ ಪಕ್ಷದ ಯಜಮಾನಿಕೆ ವಹಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಹಿಂದೆ ಹೇಳಿದ್ದೆ. ಆದರೆ ಇದೀಗ ಆ ಪಕ್ಷ ಮಣ್ಣಾಗುತ್ತಿರುವ ಹಡಗು ಎಂಬುದು ಅರ್ಥವಾಗುತ್ತಿದೆ ಎಂದು ಲೇವಡಿ ಮಾಡಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ದೇಶದ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾತ್ರ ಸಮರ್ಥ. ಅನುಭವಿ ನಾಯಕ ಎಲ್.ಕೆ.ಅಡ್ವಾಣಿ ಪ್ರಧಾನಿಯಾದರೆ ಮಾತ್ರ ಭದ್ರತೆ ಮತ್ತು ಸುರಕ್ಷತೆ ಸಾಧ್ಯ ಎಂದು ಹೇಳಿದರು.
ಚುನಾವಣೆಗೆ ಸ್ಪರ್ಧಿಸಿರುವ ನನ್ನನ್ನು ಕೆಲವರು ಮುದುಕರು ಎಂದು ಕರೆಯುತ್ತಿದ್ದಾರೆ, ಕರೆಯಲಿ ಪಾಪ, ವಯಸ್ಸಾಗುವುದು ನನ್ನ ತಪ್ಪೇ. ನನ್ನನ್ನು ಟೀಕಿಸಿರುವವರೂ ಕೂಡಾ ಒಂದು ದಿನ ಮುದುಕರಾಗುತ್ತಾರೆ. ಆದರೆ, ಕಾಂಗ್ರೆಸ್ ಜಾಫರ್ ಷರೀಫ್ ಸಾಹೇಬರಿಗೆ ಹೋಲಿಸಿದರೆ ನಾನು ಯುವಕ. ನಾನು ಅವರಿಗಿಂತ ನಾಲ್ಕು ವರ್ಷ ಚಿಕ್ಕವನು ಎಂದು ತಿರುಗೇಟು ನೀಡಿದರು.
|