ಮಂಡ್ಯ ಜನತೆಯ ಜೀವನಾಡಿ ಆಗಿರುವ ಕಾವೇರಿ ಜಲವಿವಾದದ ವಿಚಾರದಲ್ಲಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲೆಯ ಜನತೆಯೊಂದಿಗೆ ಕೊನೆ ತನಕವೂ ಉಳಿದುಕೊಂಡೆ, ಅಧಿಕಾರದಲ್ಲಿದ್ದವರು ಬೇರೆ ಯಾರು ರಾಜೀನಾಮೆ ಕೊಟ್ಟಿದ್ದಾರೆ ತೋರಿಸಲಿ ಎಂದು ಮಂಡ್ಯದ ಗಂಡು , ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಕಾಂಗ್ರೆಸ್ ಬಿ.ಫಾರಂ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕಾವೇರಿ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಅಥವಾ ಚಲುವರಾಯಸ್ವಾಮಿ ಆಗಲಿ ರಾಜೀನಾಮೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಕೇಂದ್ರದ ಸಚಿವ ಸ್ಥಾನದಂತಹ ಹುದ್ದೆ ಸಿಗಲು ನೂರು ಕೋಟಿ ಜನರ ಆಶೀರ್ವಾದ ಬೇಕು. 30-40 ವರ್ಷ ರಾಜಕಾರಣ ಮಾಡಿದರೂ ಅಂಥ ಹುದ್ದೆ ಸಿಗುವುದಿಲ್ಲ. ಆದರೂ ಮಂಡ್ಯದ ಜನತೆ ವಿಶೇಷವಾಗಿ ಮಹಿಳೆಯರು ಹಾಗೂ ಯುವಕರ ಭಾವನೆಗಳಿಗೆ ಗೌರವ ಕೊಟ್ಟು ಮಂತ್ರಿ ಹುದ್ದೆ ತ್ಯಾಗ ಮಾಡಿದೆ. ಅಧಿಕಾರದ ಆಸೆ ಇದ್ದರೆ ದೆಹಲಿಯಲ್ಲೇ ಇರುತ್ತಿದ್ದೆ ಎಂದರು.
ಈ ಕಾಲದಲ್ಲಿ ಯಾರು ಮಂತ್ರಿಸ್ಥಾನ ಬಿಡುತ್ತಾರೆ? ಕಾವೇರಿ ನದಿ ನೀರಿಗಾಗಿ ಆ ಹುದ್ದೆ ತ್ಯಾಗ ಮಾಡಿದ್ದೇನೆ, ಕ್ಷೇತ್ರದ ಜನರಿಗಾಗಿ ಅಧಿಕಾರ ಬಿಟ್ಟು 1 ವರ್ಷ 7 ತಿಂಗಳು ಸಂಸತ್ತಿಗೆ ಹೋಗದೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ನಾನು ರಾಜೀನಾಮೆ ಕೊಟ್ಟಾಗ ಅಧಿಕಾರದಲ್ಲಿದ್ದವರು ಯಾಕೆ ರಾಜೀನಾಮೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
|