ಐದು ದಶಕಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ನಿಂದ ದೇಶ ಸತ್ಯನಾಶವಾಗಿ ಹೋಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಎಲ್ಲಿಯವರೆಗೆ ಈ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ದೇಶದ ವಿಕಾಸ ಸಾಧ್ಯವಿಲ್ಲ. ಈ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಡೆ ಹಾಕಬೇಕಾದವರು ಮತದಾರರು ಎಂದು ನೆರೆದಿದ್ದ ಜನಸ್ತೋಮಕ್ಕೆ ಕರೆ ನೀಡಿದರು.ಗುರುವಾರ ಬಿಜಾಪುರದಿಂದ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ, ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಣಗಿ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೂರು ವರ್ಷಕ್ಕಿಂತಲೂ ಹಳೆಯದಾದ ಕಾಂಗ್ರೆಸ್ ಪಕ್ಷದಿಂದ ಈ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದ ಅವರು, 30ವರ್ಷದ ನವ ತಾರುಣ್ಯದ ಬಿಜೆಪಿಗೆ ಮತ ನೀಡಿ ಬೆಂಬಲಿಸಿ ಎಂದರು. ಕರ್ನಾಟಕದ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.ಈ ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಕೈ ಬಲಪಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಮೋದಿ ಭಾಷಣದುದ್ದಕ್ಕೂ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬೈ ಮೇಲೆ ದಾಳಿ ನಡೆಯಿತು, ದೇಶಾದ್ಯಂತ ಸ್ಫೋಟಗಳು ಸಂಭವಿಸುತ್ತಿದ್ದರು ಕೂಡ ಕಾಂಗ್ರೆಸ್ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆ ತರುವಲ್ಲಿ ವಿಫಲವಾಗಿದೆ. ಜನರಿಗೆ ಸುರಕ್ಷೆ ನೀಡುತ್ತೇವೆ ಎನ್ನುವ ಸೋನಿಯಾ ಗಾಂಧೀಜಿ ನೀವೇ ಉತ್ತರ ಕೊಡಿ, ಪೋಟಾ ಕಾಯ್ದೆಯನ್ನು ಯಾಕೆ ರದ್ದು ಮಾಡಿದ್ದೀರಿ? ಎಂದು ಪ್ರಶ್ನಿಸಿದ ಮೋದಿ ಹಲ್ಲಿಲ್ಲದ ಕಾನೂನನ್ನು ತಂದು ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಟೀಕಿಸಿದರು.ನನ್ನ ಬಳಿ ಎಕೆ47ರೈಫಲ್ ಲೆಸೆನ್ಸ್ ಇದೆ ಅಂದುಕೊಳ್ಳಿ, ಹಾಗಂತ ಅದನ್ನು ಮನಸ್ಸಿಗೆ ಬಂದ ಹಾಗೆ ಗುಂಡು ಹಾರಿಸಲು ಸಾಧ್ಯವೇ? ಹಾಗೆ ಹಲ್ಲಿಲ್ಲದ ಕಾನೂನು ತಂದು ಭಯೋತ್ಪಾದನೆ ನಿಗ್ರಹ ಮಾಡುತ್ತೇವೆ ಎಂಬುದು ಕಾಂಗ್ರೆಸ್ ಬೂಟಾಟಿಕೆಯಾಗಿದೆ ಎಂದು ಉದಾಹರಣೆ ಮೂಲಕ ಲೇವಡಿ ಮಾಡಿದರು.ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 3ರೂ.ಗೆ ಅಕ್ಕಿ, ಗೋಧಿ ಕೂಡುವುದಾಗಿ ಹೇಳಿದೆ, ಆದರೆ ದೆಹಲಿಯಲ್ಲಿರುವ ಸೋನಿಯಾಗೆ ಬಿಜೆಪಿ ಜನರ ಬಗ್ಗೆ ಏನೆಲ್ಲಾ ಯೋಜನೆ ಹಾಕಿಕೊಂಡಿದೆ ಎಂಬುದೇ ತಿಳಿದಿಲ್ಲ, ಕಳೆದ ಏಳು ವರ್ಷಗಳಿಂದ ಗುಜರಾತ್ನಲ್ಲಿ 2ರೂಪಾಯಿಗೆ ಅಕ್ಕಿ ಕೊಡುತ್ತಿದ್ದೇವೆ, ಬನ್ನಿ ಗುಜರಾತ್ ಜನರಲ್ಲಿ ಕೇಳಿ ಎಂದು ಹೇಳಿದರು.ಯುಪಿಎ v/s ಎನ್ಡಿಎ: ಯುಪಿಎಗೆ ಮತ ನೀಡಿ ಎಂದು ಬೊಬ್ಬೆ ಇಡುತ್ತಿದ್ದಾರೆ, ಆದರೆ ಯುಪಿಎನಲ್ಲಿ ಯಾರಿದ್ದಾರೆ, ಎಲ್ಲಿದ್ದಾರೆ ಎಂಬುದೇ ತಿಳಿಯದ ಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ನಾಲ್ಕನೇ ಶಕ್ತಿ ಅಂತ ಲಾಲೂಪ್ರಸಾದ್ ಯಾದವ್, ಮುಲಾಯಂ ಸಿಂಗ್, ಶರದ್ ಪವಾರ್ ಪ್ರಧಾನಿ ಕನಸಿನಲ್ಲಿ ಕಾಂಗ್ರೆಸ್ಗೆ ಸವಾಲೊಡ್ಡುತ್ತಿದ್ದಾರೆ. ಈಗ ಹೇಳಿ ಯುಪಿಎ, ನಾಲ್ಕನೇ ಶಕ್ತಿ ಯಾರಿಗೂ, ಯಾವುದೇ ಸ್ಪಷ್ಟತೆ ಇಲ್ಲ, ಆದರೆ ಎನ್ಡಿಎ ಮಾತ್ರ ದೇಶದ ಅಭಿವೃದ್ದಿಗೆ, ಸುರಕ್ಷತೆ ಪ್ರಾಮುಖ್ಯತೆ ನೀಡಿ ಸುಭದ್ರ ಸರ್ಕಾರ ನೀಡಬಲ್ಲದು ಎಂದು ಮೋದಿ ಮಾತಿನ ಮೋಡಿ ಹರಿಸಿದರು.ತೃತೀಯ ರಂಗದ ಅಪ್ಪ-ಅಮ್ಮ ಯಾರು?: ಯುಪಿಎ, ನಾಲ್ಕನೇ ರಂಗದ ನಡುವೆ ತೃತೀಯ ರಂಗ ಕೂಡ ಅಸ್ತಿತ್ವಕ್ಕೆ ಬಂದಿದೆ ಎಂದ ಮೋದಿ, ತೃತೀಯ ರಂಗಕ್ಕೆ ಅಪ್ಪ ಯಾರು?ಅಮ್ಮ ಯಾರು?ಹಾಲು ಕೊಡುವವರು ? ಅಂತಾನೇ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದ ಅವರು, ಚುನಾವಣೆಯ ನಂತರವೂ ವಿವಿಧ ರಂಗಗಳನ್ನು ರಚಿಸುತ್ತಲೇ ಅವು ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಕಾದು ನೋಡಿ ಎಂದು ಭವಿಷ್ಯ ನುಡಿದರು. |