ಮತ್ತೆ ಪ್ರಧಾನಿಯಾಗಬೇಕೆನ್ನುವ ಬಯಕೆ ತನಗಿಲ್ಲ, ಅದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನನಗೆ 20ಸೀಟು ಕೊಡಿ, ನನ್ನ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಪಕ್ಷದ ಚುನಾವಣಾ ಪ್ರಣಾಳಿಕೆಯ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾತನಾಡಿದ ಅವರು, ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚನೆಯಾಗುವ ಸನ್ನಿವೇಶ ರೂಪುಗೊಂಡಿದೆ ಎಂದರು.
ತೃತೀಯರಂಗದಿಂದ ಪ್ರಧಾನಿ ಯಾರಾಗುತ್ತಾರೆ ಎನ್ನುವುದಕ್ಕಿಂತ ಕಾರ್ಯಕ್ರಮಗಳ ಅನುಷ್ಠಾನವೇ ಮುಖ್ಯ ಎನ್ನುವುದನ್ನು ಆತ್ಮ ವಂಚನೆ ಇಲ್ಲದೇ ಪ್ರಣಾಳಿಕೆಯಲ್ಲಿ ಹೇಳಿದ್ದೇನೆ ಎಂದರು.
ಪ್ರಧಾನಿಯಾಗಿ ಆಡಳಿತ ನಡೆಸಿದ ಅನುಭವದ ಮೇಲೆ ಕಾರ್ಯಗತವಾಗಬಹುದಾದ ಕಾರ್ಯಕ್ರಮಗಳನ್ನಷ್ಟೇ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ ಅವರು ಜೆಡಿಎಸ್ನ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳು ಅಗ್ಗದ ಜನಪ್ರಿಯ ತಂತ್ರಗಳಲ್ಲ, ಅಕ್ಷರಶಃ ಅನುಷ್ಠಾನಗೊಳಿಸಬಲ್ಲ ಕಾರ್ಯ ಸಾಧ್ಯ ಭರವಸೆ ಎಂದರು.
ಮುಂದೆ ಕೇಂದ್ರದಲ್ಲಿ ಯಾವುದೇ ಸರ್ಕಾರ ರಚನೆಯಾಗಿ ನಮ್ಮ ಬೆಂಬಲ ಅಗತ್ಯ ಎನಿಸಿದಾಗ ಪಕ್ಷದ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸುವ ಷರತ್ತಿನೊಂದಿಗೆ ಬೆಂಬಲ ನೀಡುವುದಾಗಿ ಅವರು ಸ್ಪಷ್ಟಪಡಿಸಿದರು. |