ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸಹಚರ ಪೊಲೀಸರ ವಶದಲ್ಲಿರುವ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಖಾಸಿಮ್ಜಿ ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ವರದಿಯಾಗಿದೆ.
ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಮಂಗಳೂರಿನ ಫಳ್ನೀರ್ ಸಮೀಪದ ಲ್ಯಾನ್ಸ್ವೇ ಹೊಟೇಲ್ ಪಕ್ಕದ ತನ್ನ ಅಪಾರ್ಟ್ಮೆಂಟ್ಗೆ ಹೋಗುವ ವೇಳೆ ವಕೀಲ 35ರ ನೌಶಾದ್ರನ್ನು ಕೊಲೆಗೈಯಲಾಗಿದೆ.
ರಾತ್ರಿ ಹೊತ್ತು ಕತ್ತಲಲ್ಲೇ ನಡೆದುಕೊಂಡು ಬಂದಿದ್ದ ದುಷ್ಕರ್ಮಿಗಳಿಬ್ಬರು ನೌಶಾದ್ ಮೇಲೆ ಏಕಾಏಕಿ ಗುಂಡಿನ ಮಳೆಗರೆದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನೌಶಾದ್ ಹತ್ತಿರದ ಎಸ್ಪಿ ಅಪಾರ್ಟ್ಮೆಂಟ್ನಲ್ಲಿ ಹೋಗಿ ಆಶ್ರಯ ಪಡೆದಿದ್ದರಾದರೂ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಸ್ಥಳದಲ್ಲೇ ಮೃತಪಟ್ಟರು.
ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿದರೂ ಆರೋಪಿಗಳು ಅದಾಗಲೇ ಪರಾರಿಯಾಗಿದ್ದರು. ಶ್ವಾನದಳ ರಸ್ತೆಯ ಅಂತ್ಯದವರೆಗೆ ಹೋಗಿ ವಾಪಸು ಬಂದ ಕಾರಣ ಹೆಚ್ಚಿನ ಸುಳಿವು ಲಭ್ಯವಾಗಿಲ್ಲ. ಸ್ಥಳದಲ್ಲಿ ಐದು ಬುಲ್ಲೆಟ್ಗಳು ಪತ್ತೆಯಾಗಿವೆ.
ಘಟನೆ ನಡೆದ ನಂತರ ಬೆಂಗಳೂರಿನ ಖಾಸಗಿ ವಾಹಿನಿಯೊಂದಕ್ಕೆ ಕರೆ ಮಾಡಿರುವ ಭೂಗತ ದೊರೆ ರವಿ ಪೂಜಾರಿ ವಕೀಲರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. "ದೇಶವಿರೋಧಿಗಳಿಗೆ ಮತ್ತು ಹಿಂದೂ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಗಳಿಗೆ ರಶೀದ್ ಸಹಕಾರ ನೀಡುತ್ತಿದ್ದರು. ಅಲ್ಲದೆ ಹವಾಲಾ ಏಜೆಂಟ್ ಆಗಿಯೂ ರಾಷ್ಟ್ರದ್ರೋಹದ ಕೆಲಸಕ್ಕೆ ರಶೀದ್ ಕೈ ಹಾಕಿದ್ದರು. ಹಾಗಾಗಿ ನನ್ನ ಹುಡುಗರು ಮಂಗಳೂರಿನಲ್ಲಿ ಅವರನ್ನು ಮುಗಿಸಿದ್ದಾರೆ" ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.
ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಬಂಟನಾಗಿರುವ ರಶೀದ್ ಮಲಬಾರಿಯ ಪ್ರಕರಣವನ್ನು ಬೆದರಿಕೆಗಳ ನಡುವೆಯೂ ವಕೀಲ ನೌಶಾದ್ ವಹಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮಲಬಾರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಮಲಬಾರಿಗೆ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದೆರಡು ದಿನಗಳ ಹಿಂದೆ ನೌಶಾದ್ರಿಗೆ ಬೆದರಿಕೆ ಕರೆಗಳು ಬಂದಿದ್ದವು ಎನ್ನಲಾಗಿದೆ. ಅದಕ್ಕೂ ಮೊದಲು ಮಂಗಳೂರಿನ ಮಾಧ್ಯಮ ಕಚೇರಿಯೊಂದಕ್ಕೆ ಭೂಗತ ದೊರೆಗಳು ಕರೆ ಮಾಡಿ, ಮಲಬಾರಿಯನ್ನು ಬಿಡುಗಡೆಗೊಳಿಸದಿದ್ದರೆ ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಬಹುದು. ಭಟ್ಕಳ ಮೂಲದವರಾಗಿರುವ ನೌಶಾದ್ ಕಳೆದ ಏಳು ವರ್ಷಗಳಿಂದ ನಗರದ ಸ್ವೀಟ್ ಹೋಮ್ಸ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.
|