ಚುನಾವಣೆ ನಂತರ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಲಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆಯಿಂದ ಎಲ್ಲಾ ಕಾಂಗ್ರೆಸ್ಸಿಗರ ಎದೆ ಕುದಿಯುತ್ತಿದೆ. ಎಲ್ಲರೂ ಸೂಕ್ತ ಕಾಲದಲ್ಲಿ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ ನಾಯಕರುಗಳನ್ನು ಕರೆದುಕೊಂಡು ಹೋಗಿರಬಹುದು. ಆದರೆ ನಾಯಕರುಗಳಲ್ಲಿನ ಕಾಂಗ್ರೆಸ್ಸನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗ ಕಾಂಗ್ರೆಸ್ ಬಿಜೆಪಿ ಆಗಿರಬಹುದು. ಆದರೆ ಶೀಘ್ರದಲ್ಲೇ ಅದು ಬಿಜೆಪಿ ಕಾಂಗ್ರೆಸ್ ಆಗಲಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾನಂದ ಗೌಡರು ಕಾಂಗ್ರೆಸ್ಸಿನ ಹಿರಿಯ ನಾಯಕರನ್ನೆಲ್ಲ ಗುಜುರಿಗೆ ಹೋಲಿಸಿದ್ದಾರೆ. ಅವರ ಈ ತುಚ್ಛ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಯುಪಿಎ ಸರ್ಕಾರದ ಅಭಿವೃದ್ದಿ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ದಿ ಕುರಿತಂತೆ ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಮುಖ್ಯಮಂತ್ರಿಗಳ ಸವಾಲನ್ನು ಸ್ವೀಕರಿಸಿದ್ದೇವೆ, ಚರ್ಚೆಗೂ ಸಿದ್ಧರಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಬಂದ ಮೇಲೆ ರಾಜ್ಯದಲ್ಲಿ ನಯಾ ಪೈಸೆಯ ಬಂಡವಾಳ ಹೂಡಿಕೆಯಾಗಿಲ್ಲ. ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಬೇರೆ ರಾಜ್ಯದಿಂದ ಬರುತ್ತಿದ್ದ ವಿದ್ಯಾರ್ಥಿಗಳು ಕೂಡಾ ಈಗ ಬರುತ್ತಿಲ್ಲ ಎಂದರು.
|