ಲೋಕಸಭಾ ಚುನಾವಣೆ ಅನಂತರ ಬಿಜೆಪಿ ತಿಥಿ ಆಗುವುದು ಶತಸಿದ್ಧ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಡವರಿಗೆ 25 ಕೆ.ಜಿ ಅಕ್ಕಿ ಹಾಗೂ ನಿರುದ್ಯೋಗಿ ಭತ್ಯೆ ಸೇರಿದಂತೆ ವಿವಿಧ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದನ್ನು ಈಡೇರಿಸಿಲ್ಲ ಎಂದರು.
ಮಠ-ಮಾನ್ಯಗಳಿಗೆ ಹಣ ನೀಡಲು ಯಾವುದೇ ಕೊರತೆ ಇಲ್ಲದ ಮುಖ್ಯಮಂತ್ರಿಯವರಿಗೆ ಅಕ್ಕಿ, ನಿರುದ್ಯೋಗ ಭತ್ಯೆ ನೀಡಿಕೆಗೆ ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರಿಗೆ ಸುಳ್ಳಿಗೊಂದು ದೇವರು, ಸತ್ಯಕ್ಕೊಂದು ದೇವರು ಇದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ದೇವರಾಣೆಗೂ ಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಇದೀಗ ಪುತ್ರನನ್ನೇ ಅಭ್ಯರ್ಥಿಯನ್ನಾಗಿಸಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಎಂಬುದೇ ಇಲ್ಲವಾಗಿದೆ. ಅಲ್ಲಿನ ಸಚಿವರುಗಳೇ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾವರ್ತನೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. |