ಈ ಚುನಾವಣೆ ನನ್ನ ಕೊನೆಯ ರಾಜಕೀಯ ಹೋರಾಟ. ಗೆದ್ದರೆ ಬಡವರ ಓಟಿನಿಂದ ಗೆಲ್ಲುತ್ತೇನೆ, ಸೋತರೆ ಶ್ರೀಮಂತರ ನೋಟಿನಿಂದ ಸೋಲುತ್ತೇನೆ. ಇವೆರಡಕ್ಕೂ ನಾನು ಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಪೋರೇಟ್ ವಲಯದ ಉನ್ನತ ಹುದ್ದೆಗಳಿಗೆ ಮನಬಂದಂತೆ ಸಂಬಳ ನಿಗದಿಪಡಿಸಿಕೊಳ್ಳುವ ಸ್ವೇಚ್ಚಾಚಾರಕ್ಕೆ ತಡೆ ಹಾಕುವ ಮಸೂದೆ ತರುವುದಾಗಿ ಹೇಳಿದ್ದೇನೆ. ಇದರಿಂದ ಉದ್ಯಮಪತಿಗಳು ಜೆಡಿಎಸ್ ಚುನಾವಣಾ ವೆಚ್ಚಕ್ಕೆ ವಂತಿಗೆ ನೀಡಲು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾನು ಕಾರ್ಪೋರೇಟ್ ವಲಯದವರ ಸಹಾಯವನ್ನು ನೀರೀಕ್ಷಿಸಿಯೂ ಇಲ್ಲ. ಸಣ್ಣಪುಟ್ಟ ಉದ್ಯಮಪತಿಗಳು ಸಹಾಯ ಮಾಡಿದರೆ ನೀರೀಕ್ಷಿಸುತ್ತೇನೆಯೇ ಹೊರತು ಶ್ರೀಮಂತರ ಮನೆ ಬಾಗಿಲಿಗೆ ಹೋಗುವುದಿಲ್ಲ" ಎಂದರು.
ನಾನು ಬಹಳ ಕೋಪಿಷ್ಠ. ಹಾಗಾಗಿಯೇ ನನ್ನ ಬಳಿ ಜಗಳವಾಡಿಕೊಂಡು ಕೆಲವರು ಪಕ್ಷ ಬಿಟ್ಟು ಹೋಗುತ್ತಾರೆ. ಹಾಗೆಂದು ಬಡವರ ಬಗ್ಗೆ ಅನುಕಂಪ ಕಡಿಮೆ ಮಾಡಿಕೊಳ್ಳುವುದಿಲ್ಲ. ಈ ಬಾರಿ ಜೆಡಿಎಸ್ಗೆ ಸರ್ಕಾರದಲ್ಲಿ ಅವಕಾಶ ಸಿಕ್ಕರೆ ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು ಎಂದರು.
|