ಮಾಜಿ ಶಾಸಕ ಯು.ಆರ್. ಸಭಾಪತಿ ಅವರು ಕಾಂಗ್ರೆಸ್ ಪಕ್ಷದ ತನ್ನ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಪಕ್ಷವು ಹಲವಾರು ಸಂಘಟನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅದು ಪಕ್ಷದಲ್ಲಿ ಯುವಕರಿಗೆ ಬೆಳೆಯಲು ಆದ್ಯತೆ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಳೆದ ಐದು ವರ್ಷಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಮರುಸಂಘಟಿಸಿಲ್ಲ. ಜನಾರ್ದನ ಪೂಜಾರಿ ಅಧ್ಯಕ್ಷರಾಗಿದ್ದಾಗ ನೇಮಿಸಿರುವ ಅದೇ ಮಂಡಳಿ ಇಂದಿಗೂ ಮುಂದುವರಿದಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾರ್ಯವಹಿಸಿದ್ದ ಅದೇ ಮಂಡಳಿಯು ಆರ್.ವಿ. ದೇಶಪಾಂಡೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ಕಾರ್ಯವಹಿಸುತ್ತಿದೆ ಎಂದು ಅವರು ಟೀಕಿಸಿದರು.
ಪಕ್ಷದ ಸಂವಿಧಾನದ ಪ್ರಕಾರ ಜಿಲ್ಲಾ ಸಮಿತಿಗೆ ಒಬ್ಬ ವ್ಯಕ್ತಿ ಎರಡು ಸರ್ತಿ ಮಾತ್ರ ಅಧ್ಯಕ್ಷರಾಗಬಹುದು. ಆದರೆ ಉಡುಪಿ ಜಿಲ್ಲಾ ಡಿಸಿಸಿ ಅಧ್ಯಕ್ಷ ಎಂ.ಎ. ಗಫೂರ್ ಅವರು ನಾಲ್ಕನೆ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಪಕ್ಷವು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸೋಲನ್ನಪ್ಪಿದೆ. ಸ್ವಯಂ ಗಫೂರ್ ಅವರೇ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಅವರನ್ನು ಬದಲಿಸಿಲ್ಲ. ಪಕ್ಷಕ್ಕೆ ತನ್ನಂತಹ ಯುವಕರ ಅವಶ್ಯಕತೆ ಇಲ್ಲ. ಪಕ್ಷವು ಇನ್ನೂ ಹಳಬರಿಗೆ ಟಿಕೆಟ್ ನೀಡುತ್ತಿದೆ ಎಂದು ದೂರಿದರು.
ವಿ.ಎಸ್. ಆಚಾರ್ಯ ಹಾಗೂ ಎ.ಜಿ.ಕೊಡ್ಗಿಯವರಂತಹ ಬಿಜೆಪಿ ನಾಯಕರು ಅವರ ಪಕ್ಷಕ್ಕೆ ಸೇರವಂತೆ ವಿನಂತಿಸಿದ್ದಾರೆ. ತನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತಾನು ನಿರ್ಧಾರ ಕೈಗೊಳ್ಳುವುದಾಗಿ ಅವರು ನುಡಿದರು. |