ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ರಾಜ್ಯ ಬಿಜೆಪಿಯು ಆ ಪಕ್ಷದ ಸರ್ಕಾರವಿರುವ ಗುಜರಾತ್ನಿಂದ ವ್ಯಾಪಕ ಪ್ರಮಾಣದಲ್ಲಿ ಮದ್ಯವನ್ನು ಅಕ್ರಮವಾಗಿ ತರಿಸಿಕೊಂಡು ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಸ್ಪರ್ಧಿಸಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ದೊರೆತಿರುವ ಬೃಹತ್ ಪ್ರಮಾಣದ ಮದ್ಯದ ಸೀಸೆಗಳ ಮೇಲೆ 'ಬಾಸ್' ಎಂಬ ಕಂಪೆನಿಯ ಹೆಸರು ಮುದ್ರಿತವಾಗಿದೆ. ಆ ಕಂಪೆನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿರುವ ಗುಜರಾತ್ ರಾಜ್ಯದ್ದಾಗಿದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಹಾಗೂ ವಕ್ತಾರ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಚಕ್ರದ ಹಾಗೂ 40 ಟನ್ ಸಾಮರ್ಥ್ಯವಿರುವ ಬೃಹತ್ ಲಾರಿಯಲ್ಲಿ ಮದ್ಯ ಬಂದಿದೆ. ಉಳವಿಯಲ್ಲಿ ಸಚಿವ ಹಾಲಪ್ಪ ಬಿಜೆಪಿ ಕಾರ್ಯಕರ್ತನ ನಿವಾಸದಲ್ಲಿ ಮದ್ಯದ ಸೀಸೆಗಳ ನಡುವೆ ಕುಳಿತಿದ್ದರು ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಪತ್ತೆ ಹಚ್ಚಿರುವುದೇ ಸಾಕ್ಷಿ ಎಂದರು.
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ರಾಜ್ಯದ ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ವ್ಯಾಪಕ ಚುನಾವಣಾ ಅಕ್ರಮದಲ್ಲಿ ನಿರತವಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದೇ ಅನುಮಾನವಾಗಿದೆ ಎಂದು ಅವರು ನುಡಿದರು.
|