ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸ್ಫರ್ಧೆಗೆ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ತೀವ್ರ ಕ್ಷೋಭೆಗೊಳಗಾಗಿದ್ದ ಮಾಜಿ ಸಂಸದ ಎಂ.ಶಿವಣ್ಣ ಅವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ತಮಿಳ್ನಾಡು ಲೋಕಸಭಾ ಚುನಾವಣೆಯ ವೀಕ್ಷಕರನ್ನಾಗಿ ನೇಮಿಸಿದ್ದಾರೆ. ಟಿಕೆಟ್ ಕೈ ತಪ್ಪಿದ್ದರಿಂದ ಕಣ್ಣೀರು ಸುರಿಸಿ ತನ್ನ ನೋವನ್ನು ಬಹಿರಂಗವಾಗಿ ತೋರ್ಪಡಿಸಿದ್ದ, ಶಿವಣ್ಣ ಅವರಿಗೆ ತಮಿಳ್ನಾಡು ವೀಕ್ಷಕರ ಹುದ್ದೆ ನೀಡಿ, ತಾತ್ಕಾಲಿಕವಾಗಿ ನೋವು ಶಮನ ಮಾಡಿರುವ ಕಾಂಗ್ರೆಸ್ ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದೆ.
"ಸ್ಥಳೀಯ ಮುಖಂಡರು ಟಿಕೆಟ್ ನೀಡಬಾರದು ಎಂಬ ಒತ್ತಡ ತಂದರೂ, ಈ ಹಿಂದೆ ಕೊಟ್ಟ ಮಾತಿನಂತೆ ನಿಮಗೆ ಟಿಕೆಟ್ ನೀಡಬೇಕೆಂದಿದ್ದರೂ, ಟಿಕೆಟ್ ನೀಡಿದ ಬಳಿಕ ಶಾಸಕರು ಸಹಕರಿಸದಿದ್ದರೆ, ಎಂಟೂ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಒಂದು ಸ್ಥಾನವನ್ನು ಕಳೆದುಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಮತ್ತು ಪ್ರತಿಯೊಂದು ಸೀಟು ಪ್ರಾಮುಖ್ಯ ಎಂದು ಪರಿಗಣಿಸಿ, ಶಾಸಕರು ಶಿಫಾರಸ್ಸು ಮಾಡಿರುವವರಿಗೆ ಟಿಕೆಟ್ ನೀಡಲಾಯಿತು" ಎಂದು ಮೇಡಂ ತನಗೆ ತಿಳಿಸಿದರು ಎಂದು ಶಿವಣ್ಣ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಶಿವಣ್ಣ ಶುಕ್ರವಾರ ರಾತ್ರಿ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ಆಸ್ಕರ್ ಫರ್ನಾಂಡಿಸ್ ಉಪಸ್ಥಿತರಿದ್ದರು. |