ಕನ್ನಡ ಚಿತ್ರರಂಗವನ್ನು ಅರ್ಧಶತಮಾನಕ್ಕೂ ಹೆಚ್ಚು ಕಾಲ ಆಳಿದ್ದ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ| ರಾಜಕುಮಾರ್ ಕಾಲವಾಗಿ ಭಾನುವಾರಕ್ಕೆ ಮೂರು ವರ್ಷ ಸಂದ ಹಿನ್ನೆಲೆಯಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ತೆರಳಿ ಅಗಲಿದ ಕಲಾವಿದನಿಗೆ ನಮನ ಸಲ್ಲಿಸಿದರು. ಇದೇ ವೇಳೆ ರಾಜ್ ನಿವಾಸದಲ್ಲಿ ಅನ್ನ ಸಂತರ್ಪಣೆ ಕಾರ್ಯವೂ ನಡೆದಿದೆ.
77 ವರ್ಷಗಳ ತುಂಬು ಜೀವನ ನಡೆಸಿದ್ದ ಮುತ್ತುರಾಜ್ ಜನಮಾನಸದ ಕಲಾವಿದ. ಅವರು ನಟಿಸಿದ ಚಿತ್ರಗಳಿಂದ ಹಾಗೂ ಸರಳಸಜ್ಜನಿಕೆಯ ನಡೆನುಡಿಯಿಂದಾಗಿ ಅವರು ನೆನಪು ಎಂದಿಗೂ ಶಾಶ್ವತವೇ.
ರಾಜ್ ಕುಮಾರ್ ಅವರ ಅಪಾರ 'ಅಭಿಮಾನಿ ದೇವರುಗಳು', ಅವರ ಪತ್ನಿ ಪಾರ್ವತಮ್ಮ, ಪುತ್ರರಾದ ಶಿವರಾಜ್, ಪುನೀತ್, ರಾಘವೇಂದ್ರ ಮತ್ತು ಕುಟುಂಬವರು ರಾಜ್ ಸಮಾಧಿಗೆ ಆರತಿ ಬೆಳಗಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಬಂಧುಗಳು, ಸ್ನೇಹಿತರು ಕೂಡ ರಾಜ್ ಮೂರನೇ ಪುಣ್ಯತಿಥಿಯಂದು ಪುಪ್ಪಾರ್ಚನೆ ಸಲ್ಲಿಸಿದರು.
ನೆರೆದವರಲ್ಲಿ ಕೆಲವರು ಕಂಬನಿ ಮಿಡಿದು ಅದ್ಭುತ ಕಲಾವಿನನ್ನು ಸ್ಮರಿಸಿದರು. ಎಲ್ಲೆಲ್ಲೂ ರಾಜ್ ಜಯಘೋಷ ಮನೆಮಾಡಿತ್ತು. |