ಅಧಿಕಾರ ಎನ್ನುವುದು ತಾನಾಗಿಯೇ ಹುಡುಕುತ್ತಾ ಬಂದಾಗ ಸುಮ್ಮನೆ ಕೂರಲು ನಾನು ಸನ್ಯಾಸಿಯಲ್ಲ. 28 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ನನ್ನದೇ ಆದ ವರ್ಚಸ್ಸು ಉಳಿಸಿಕೊಂಡು ಬಂದಿದ್ದೇನೆ. ನನ್ನನ್ನು ನಂಬಿದ ಕಾರ್ಯಕರ್ತರಿಗೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಂತ ನೀರಲ್ಲ. ಸದಾ ಹರಿಯುವ ನೀರು. ಉತ್ತಮ ಸಂಘಟಕನಾಗಿ, ಬೀದರ್ನಿಂದ ಚಾಮರಾಜನಗರದವರೆಗೆ ನನ್ನ ಪರಿಚಯವಿದೆ. ಬಿಜೆಪಿ ಹೈಕಮಾಂಡ್ ಯಾವ ಹುದ್ದೆ ನೀಡಿದರೂ ಪಕ್ಷದ ಶಿಸ್ತಿನ ಸಿಪಾಯಿಯಂತೆ ಸಮರ್ಥವಾಗಿ ನಿಭಾಯಿಸಿಸಲು ತಯಾರಿರುವುದಾಗಿ ತಿಳಿಸಿದರು.
ಬಿಜೆಪಿಯವರಿಗೆ ನೀವು ಹೊರಗಿನವನು ಎಂಬ ಭಾವನೆ ಇದೆಯಲ್ಲಾ ಎಂಬ ಪ್ರಶ್ನೆಗೆ, "ನಾನೂ ಸಹ ಆರ್ಎಸ್ಎಸ್ ಮೂಲದವನು. ಹಾಗಾಗಿ ಬಿಜೆಪಿಯವರಿಗೆ ನನ್ನ ಬಗ್ಗೆ ಬೇರೆ ಭಾವನೆಬರಲು ಸಾಧ್ಯವಿಲ್ಲ. ಯುವ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಲು ಶಕ್ತನಾಗಿದ್ದೇನೆ" ಎಂದರು.
ಮಹದೇವಪ್ಪ ಹಾಗೂ ನಾನು ಸ್ನೇಹಿತರು. ರಾಜಕಾರಣದಲ್ಲಿ ನನಗಿಂತ ಅವರು ಹಿರಿಯ ರಾಜಕಾರಣಿ. ಅವರ ಬಗ್ಗೆ ಅಪಾರ ಗೌರವವಿದೆ ಎಂದರು.
|