ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ತನಗೆ ತಿಳಿದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕನ ಸ್ಥಾನ ಏರಿಕೆಯ ಕನಸನ್ನು ಮುಂದೂಡಿದಂತಾಗಿದೆ.ಅಲ್ಲದೆ, ಕೇಂದ್ರದಲ್ಲಿ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತಸ್ಥಾನಮಾನ ಸಿಕ್ಕಿದ ಬಳಿಕವಷ್ಟೆ ಸಿದ್ದರಾಮಯ್ಯರಿಗೆ ವಿಪಕ್ಷ ಸ್ಥಾನ ಎಂದೂ ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ಗೆ ಸೇರಿ ಎರಡು ವರ್ಷ ಕಳೆದರೂ ಭರವಸೆ ನೀಡಿದಂತೆ ತನಗೆ ಸೂಕ್ತಸ್ಥಾನ ನೀಡಿಲ್ಲವೆಂದು ಸಿದ್ದರಾಮಯ್ಯ ಆಗೀಗ ತನ್ನ ಕೋಪ ತೋರಿಸುತ್ತಲೇ ಬಂದಿದ್ದಾರೆ. ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿದ ನಂತರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, "ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಹಿತಿ ನನಗೆ ಗೊತ್ತಿಲ್ಲ. ಗುಲ್ಬರ್ಗಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿರುವ ಖರ್ಗೆ ಅವರ ಗೆಲುವು ಖಚಿತ. ಅವರು ದೆಹಲಿಗೆ ತೆರಳಲಿದ್ದಾರೆ. ಅಲ್ಲದೇ ಕೇಂದ್ರದಲ್ಲಿ ಯುಪಿಎ ಸರ್ಕಾರ ಇನ್ನೊಂದು ಬಾರಿ ಸರ್ಕಾರ ರಚಿಸುವುದು ಸತ್ಯ. ಕೇಂದ್ರ ಸರ್ಕಾರದಲ್ಲಿ ಖರ್ಗೆ ಅವರಿಗೆ ಸೂಕ್ತ ಸ್ಥಾನಮಾನ ನೀಡಿದ ನಂತರ ರಾಜೀನಾಮೆ ನೀಡುವ ಪ್ರಕಿಕ್ರಿಯೆಗೆ ಚಾಲನೆ ನೀಡಲಾಗುವುದು. ಒಟ್ಟಿನಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ" ಎಂದು ದೇಶಪಾಂಡೆ ಹೇಳಿದರು. ಎರಡು ದಿನಗಳ ಹಿಂದೆಯಷ್ಟೆ ಮಲ್ಲಿಕಾರ್ಜುನ ಖರ್ಗೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯಾಗಿತ್ತು. ತಮ್ಮ ನಾಯಕನಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಸಿದ್ದು ಬೆಂಬಲಿಗರು ಪ್ರಚಾದಿಂದ ಹಿಂದೆ ಸರಿಯಲು ನಿರ್ಧಾರಿಸಿದ್ದಾರೆ ಎಂಬ ಸುದ್ದಿಯ ಮರುದಿನದಂತೆ ಖರ್ಗೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಿದ್ದು ಯಾವ ದಾಳ ಹರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ತನಗೆ ಮಣೆಹಾಕದ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳದೆ ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗುವಂತೆ ಮಾಡಿದ್ದರು. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನೂ ಗಳಿಸಿರಲಿಲ್ಲ. |