ಸಂಸದರ ನಿಧಿ ದುರ್ಬಳಕೆ ಆರೋಪದಿಂದಾಗಿ ನನೆಗುದಿಗೆ ಬಿದ್ದಿದ್ದ ಇಲ್ಲಿನ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ ಅವರ ನಾಮಪತ್ರವನ್ನು ಸೋಮವಾರ ಸ್ವೀಕರಿಸಲಾಗಿದೆ.
ಸಂಸದರ ನಿಧಿಯ ದುರ್ಬಳಕೆ ಆರೋಪವನ್ನು ಸಿದ್ದೇಶ್ ಅವರು ಎದುರಿಸುತ್ತಿದ್ದು, ಈ ಪ್ರಕರಣದ ವಿಚಾರಣೆಯನ್ನು ಚುನಾವಣಾಧಿಕಾರಿಯಾಗಿರುವ ದಾವಣಗೆರೆ ಜಿಲ್ಲಾಧಿಕಾರಿ ಮಂಜುನಾಥ್ ಪ್ರಸಾದ್ ನಡೆಸಿದ್ದರು.
ವಿಚಾರಣೆಯಲ್ಲಿ ಕಾಂಗ್ರೆಸ್ ಪರವಾಗಿ ಉಗ್ರಪ್ರ ಹಾಗೂ ಕೊಂಡಯ್ಯ ಅವರು ಪಾಲ್ಗೊಂಡಿದ್ದರೆ, ಬಿಜೆಪಿ ಪರವಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಶಿವಯೋಗಸ್ವಾಮಿ ಹಾಗೂ ವಕೀಲ ಎಂ.ಪಿ. ನರಗುಂದ ಅವರು ಭಾಗವಹಿಸಿದ್ದರು. ವಾದ ವಿವಾದವನ್ನು ಆಲಿಸಿದ ಚುನಾವಣಾ ಅಧಿಕಾರಿಯವರು ಸಿದ್ದೇಶ್ ಅವರು ಸಂಸದರ ನಿಧಿಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು ಅವರ ನಾಮಪತ್ರವನ್ನು ಸ್ವೀಕರಿಸಿದರು.
ಲಾಠಿ ಛಾರ್ಜ್ ಸಿದ್ದೇಶ್ ನಾಮಪತ್ರ ಸ್ವೀಕಾರ ವಿಚಾರ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಮಾರಾಮಾರಿ ಸಂಭವಿಸಿತು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಛಾರ್ಜ್ ನಡೆಸಿದರು.
ಉಗ್ರಪ್ಪ ವಿರುದ್ಧ ಆಯೋಗಕ್ಕೆ ದೂರು ಸಿದ್ದೇಶ್ ನಾಮಪತ್ರ ಸ್ವೀಕಾರ ಕುರಿತ ವಾದವಿವಾದದ ವೇಳೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರು ಚುನಾವಣಾ ಅಧಿಕಾರಿಯವರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜಿಲ್ಲಾಧಿಕಾರಿಯವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಾರೆ ಎಂದು ಉಗ್ರಪ್ಪ ಹೇಳಿದ್ದಾರೆನ್ನಲಾಗಿದೆ. ಉಗ್ರಪ್ಪ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಜಿಲ್ಲಾಧಿಕಾರಿ ಮಂಜುನಾಥ್ ಪ್ರಸಾದ್, ಉಗ್ರಪ್ಪ ಹೇಳಿಕೆಯನ್ನೊಳಗೊಂಡಿರುವ ಸಿಡಿಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.
|