ಕೇಂದ್ರದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸಿದ ಡಾ. ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮನಮೋಹನ್ ಸಿಂಗ್ ಅವರು ಈ ದೇಶ ಕಂಡ ಸಮರ್ಥ ನಾಯಕ ಹಾಗೂ ಆದರ್ಶ ವ್ಯಕ್ತಿತ್ವವುಳ್ಳವರು ಎಂದು ಅವರು ಇದೇ ಸಂದರ್ಭದಲ್ಲಿ ಬಣ್ಣಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ತ್ರಗಳು ತಲ್ಲಣಗೊಂಡಿದ್ದರೂ ಭಾರತ ಮಾತ್ರ ಸದೃಢವಾಗಿ ಉಳಿಯಲು ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ಹಾಗೂ ಕಾರ್ಯದಕ್ಷತೆ ಕಾರಣ ಎಂದರು.
ಡಿ.ಬಿ. ಚಂದ್ರೇಗೌಡ ಪಕ್ಷಾಂತರ ಮಾಡಿ ಬಿಜೆಪಿಗೆ ಸೇರಿ ಅಭ್ಯರ್ಥಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು ಎಂದು ಚಂದ್ರೇಗೌಡರು ಹೇಳಿದ್ದಾರೆ. ಪಾಪ, ಅವರಿಗೆ ಕೊನೇ ಕ್ಷಣದಲ್ಲಿ ಜ್ಞಾನೋದಯವಾಯಿತು" ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ವಿ. ಸೋಮಣ್ಣ ಅವರ ಬಿಜೆಪಿ ಸೇರ್ಪಡೆ ಕುರಿತು, "ಆಪರೇಷನ್ ಕಮಲ ಎಂದು ಶಾಸಕರನ್ನು ಸೆಳೆಯುತ್ತಿರುವುದು ಅಸಹ್ಯ ಪ್ರವೃತ್ತಿ. ನನ್ನ ರಾಜಕೀಯ ಜೀವನದಲ್ಲಿ ಇಂತಹ ರಾಜಕಾರಣ ನೋಡುತ್ತಿರುವುದು ದುರ್ದೈವದ ಸಂಗತಿ" ಎಂದು ಹೇಳಿದರು.
|