ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಡಿ, ಕೊಚ್ಚು, ಕೊಲ್ಲು ಎಂದು ಸಾಂವಿಧಾನಿಕ ಪ್ರಜಾಪ್ರಭುತ್ವ ಹಾಗೂ ನಾಗರಿಕ ಸಮಾಜದ ಸಭ್ಯತೆಗೆ ವಿರುದ್ಧವಾಗಿ ಮಾತನಾಡುತ್ತಿರುವ ಕೆಲವು ರಾಜಕಾರಣಿಗಳನ್ನು ಚುನಾವಣೆಯಿಂದ ದೂರವಿಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕದ ಸಾಹಿತಿ ಹಾಗೂ ಕಲಾವಿದರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಸಾಹಿತಿಗಳಾದ ಡಾ| ಯು.ಆರ್. ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ್ ಪಾಟೀಲ, ಕೋ. ಚೆನ್ನಬಸಪ್ಪ, ಡಿ.ಕೆ. ಚೌಟ ಸೇರಿದಂತೆ ರಾಜ್ಯದ ಅನೇಕ ಸಾಹಿತಿ ಪ್ರಮುಖರ ಬಳಗ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯಗಳ ಮಂಡನೆ, ಚರ್ಚೆ, ಸಂವಾದ ಅಗತ್ಯ. ಆಷದರೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳ ಮಾತು ಚುನಾವಣೆ ಸಾಂವಿಧಾನಿಕ ಉತ್ತರದಾಯಿತ್ವವನ್ನು ನಾಶ ಮಾಡುತ್ತವೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇಬ್ಬರು ವ್ಯಕ್ತಿಗಳು ಪರಸ್ಪರ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದಾಡುವುದು ಆ ಇಬ್ಬರ ಸಮಸ್ಯೆಯಾಗಿ ಉಳಿಯುವುದಿಲ್ಲ. ಬದಲಾಗಿ ಇದು ಕೇಳಿಸಿಕೊಳ್ಳುವವರ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ಇಂತಹ ಭಾಷೆಯನ್ನು ಬಳಸುತ್ತಿರುವವರನ್ನು ಚುನಾವಣೆಯಿಂದ ದೂರ ಇಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಅಲ್ಲದೇ ಇದರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.
|