ನಮ್ಮ ಸಂಸ್ಥೆಯಲ್ಲೂ ಭ್ರಷ್ಟಾಚಾರಿಗಳಿದ್ದು, ಇತ್ತೀಚೆಗೆ ಕೆಲ ಅಧಿಕಾರಿಗಳನ್ನು ಅವರ ಮಾತೃ ಸಂಸ್ಥೆಗೆ ವಾಪಸ್ ಕಳುಹಿಸಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಕಳೆದ ನೂರು ದಿನಗಳಲ್ಲಿ ಲೋಕಾಯುಕ್ತದ ಸಾಧನೆಗಳ ಬಗ್ಗೆ ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮ ಸಂಸ್ಥೆಯ ದುರ್ಬಳಕೆಯಾಗುತ್ತಿದ್ದು ಆಂತರಿಕ, ಬಾಹ್ಯ ಶಕ್ತಿಗಳು ಕೆಲಸ ಮಾಡುತ್ತಿವೆ. ಇದನ್ನು ನಾನು ಸಹಿಸುವುದಿಲ್ಲ" ಎಂದರು.
ನಮ್ಮ ಇಲಾಖೆ ಅಧಿಕಾರಿಯೊಬ್ಬರು ಲಂಚ ಕೊಡುವಂತೆ ಬೆದರಿಸಿದ್ದಾರೆಂದು ಇತ್ತೀಚೆಗೆ ದೂರು ಬಂದಿತ್ತು. ಈ ಸಂಬಂಧ ಕೂಲಂಕಷ ವಿಚಾರಣೆ ಮಾಡಲಾಗಿದೆ. ನಮ್ಮ ಇಲಾಖೆ ಅಧಿಕಾರಿಯನ್ನೇ ಬಲೆಗೆ ಕೆಡಹುವ ಅವಕಾಶ ಸಿಕ್ಕರೆ ಅದಕ್ಕಿಂತ ಸಂತೋಷದ ವಿಚಾರ ಬೇರೆ ಇಲ್ಲ. ನಮ್ಮ ಯಾವ ಅಧಿಕಾರಿ ಹಣ ಕೇಳುತ್ತಾನೆ ಎಂಬ ಮಾಹಿತಿ ನೀಡಿದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರದಲ್ಲಿ ಕಿಂಚಿತ್ತೂ ಪಕ್ಷಪಾತ ಇಲ್ಲ ಎಂದು ಹೇಳಿದರು.
ಕೆಲವು ದೂರುಗಳ ವಿಚಾರಣೆ ನಡೆಸಿದಾಗ ಅವು ಸತ್ಯವೆನಿಸಿದರಿಂದ ಆರು ಸಿಬಂದಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿದ್ದೇನೆ. ಈ ಪಟ್ಟಿಯಲ್ಲಿ ಇನ್ಸ್ಪೆಕ್ಟರ್ಗಳು ಹಾಗೂ ಡಿವೈಎಸ್ಪಿಗಳೂ ಸೇರಿದ್ದಾರೆ ಎಂದು ವಿವರಣೆ ನೀಡಿದರು.
|