ಜಿಲ್ಲೆಯಲ್ಲಿ ಚುನಾವಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಆಡಳಿತ ಪಕ್ಷದ ಮೂಗಿನಡಿಯಲ್ಲಿಯೇ ಎಲ್ಲವೂ ನಡೆಯುತ್ತಿದೆ. ಅಕ್ರಮ, ಸ್ವೇಚ್ಚಾಚಾರ, ಅಕ್ರಮ ಮದ್ಯಪೂರೈಕೆ ಮಿತಿಮೀರಿದ್ದು, ಇದೆಲ್ಲದರ ನೈತಿಕ ಹೊಣೆಹೊತ್ತು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಒತ್ತಾಯಿಸಿದ್ದಾರೆ.
ಜಿಲ್ಲೆಯ ಅವ್ಯವಸ್ಥೆ ಸರಿಪಡಿಸುವಂತೆ ಮತ್ತು ಇಲ್ಲಿನ ಡಿಸಿ ಮತ್ತು ಡಿವೈಎಸ್ಪಿ ಅವರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿ ಮತ್ತು ಉಳವಿಯಲ್ಲಿ ಅಕ್ರಮ ಮದ್ಯ ದೊರಕಿತ್ತು. ಇದು ಬಿಜೆಪಿಗೆ ಸೇರಿದ್ದೆಂದು ಡಿಸಿ ದೃಢಪಡಿಸಿದ್ದಾರೆ. ಇದರ ಹಿಂದೆ ಯಾರೇ ಇದ್ದರೂ ಅಂತಿಮವಾಗಿ ಮುಖ್ಯಮಂತ್ರಿ ಮತ್ತು ಗೃಹಸಚಿವರೇ ಇದೆಲ್ಲದರ ಹೊಣೆ ಹೊರಬೇಕಾಗಿದ್ದು ,ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಆಡಳಿತ ಯಂತ್ರ, ಆಡಳಿತಾರೂಢ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿದೆ. ಈಗಿನ ಸ್ಥಿತಿಯನ್ನು ನೋಡಿದರೆ ಮುಂದಿನ ಹದಿನೈದು ದಿನಗಳು ಯಾವ ರೀತಿ ಇರುತ್ತದೆ ಎಂದು ಊಹಿಸಲೂ ಕಷ್ಟವಾಗುತ್ತದೆ. ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದವರು ದೂರಿದರು.
|