ತನ್ನ ಮೇಲಿರುವ ಗಣಿ ಲಂಚ ಆರೋಪ ಸಾಬೀತಾದರೆ ತಾನು ಗಲ್ಲಿಗೇರಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. ತಾನು ಯುಡಿಯೂರಪ್ಪ ಅವರ ದಯೆಯಿಂದ ಮುಖ್ಯಮಂತ್ರಿಯಾಗಿಲ್ಲ, ಅವರೇ ತನ್ನ ನಿವಾಸಕ್ಕೆ ಬಂದಿದ್ದರು, ತನ್ನ ದೇವರ ಮನೆಗೆಯಲ್ಲಿ ಮಾತುಕತೆ ನಡೆಸಿದರು ಎಂದು ನುಡಿದರು. ಅಲ್ಲದೆ, ತಮ್ಮ ಪಕ್ಷದ ಶಾಸಕರಿಂದ ತಾನು ಮುಖ್ಯಮಂತ್ರಿಯಾದೆ ಎಂದು ಅವರು ನುಡಿದರು.
ಗಣಿ ಲಂಚ ಹಗರಣದ ಕುರಿತು ಪದೇಪದೇ ಕೆದಕುತ್ತಿರುವ ಬಿಜೆಪಿಗೆ ಅವರು ಈ ರೀತಿಯ ತಿರುಗೇಟು ನೀಡಿದ್ದಾರೆ. ಅಲ್ಲದೆ, ಗ್ರಾಮವಾಸ್ತಾವ್ಯದ ಕುರಿತು ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಕೇವಲವಾಗಿ ಮಾತನಾಡಿರುವ ವಿರುದ್ಧವೂ ಕೆಂಡ ಕಾರಿದರು. ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ತನ್ನ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನೇ ತನ್ನ ಸಾಧನೆ ಎಂಬುದಾಗಿ ಪ್ರಸ್ತುತ ಸರ್ಕಾರ ಹೇಳಿಕೊಳ್ಳುತ್ತಿದೆ. ಗ್ರಾಮ ವಾಸ್ತವ್ಯದಂತಹ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು ತಾನೆ ಎಂದು ಅವರು ನುಡಿದರು. ಇಷ್ಟರವರೆಗೆ ಸರ್ಕಾರ ಯಾವುದೇ ಹೊಸ ಕಾರ್ಯಗಳನ್ನು ಜಾರಿಗೆ ತಂದಿಲ್ಲ ಎಂದು ಅವರು ದೂರಿದರು.
ನಾಲಿಗೆ ಮೇಲೆ ಹಿಡಿತವಿರಲಿ ಈ ಮಧ್ಯೆ ಕುಮಾರ ಸ್ವಾಮಿ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ ಅವರು, ಜೆಡಿಎಸ್ ನಾಯಕರು ತಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿರಲಿ ಎಂದಿದ್ದಾರೆ ಅಲ್ಲದೆ, ಕುಮಾರ ಸ್ವಾಮಿ ಹಾಗೂ ಅವರಪ್ಪ ದೇವೇ ಗೌಡರಿಬ್ಬರೂ ವಿಶ್ವಾಸ ದ್ರೋಹಿಗಳು ಎಂದು ದೂರಿದ್ದಾರೆ. |