ಬೀದರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮಸಿಂಗ್ ಪರ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿ ಹಾಗೂ ಬಿಜೆಪಿ ನಾಯಕ ಆಡ್ವಾಣಿಯವರ ಮೇಲೆ ಆಕ್ರಮಣಕಾರಿ ವಾಗ್ದಾಳಿ ನಡೆಸಿದ್ದು ಆಡ್ವಾಣಿ ಅರೆಸ್ಸೆಸ್ನ ಜೀತದಾಳು ಎಂದು ದೂರಿದರು. ಇದೇ ಪ್ರಥಮ ಬಾರಿಗೆ ಸೋನಿಯಾ ಅವರು ಆರೆಸ್ಸೆಸ್ನತ್ತ ಬೆಟ್ಟು ಮಾಡಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪದೇಪದೇ ದುರ್ಬಲ ಪ್ರಧಾನಿ ಎಂದು ಟೀಕಿಸುತ್ತಿರುವ ಆಡ್ವಾಣಿಯವರನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ, ಆಡ್ವಾಣಿಯವರಿಗೆ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಇಲ್ಲ, ಅವರು ಕಂಧಹಾರ್ ವಿಮಾನ ಅಪಹರಣವಾದಾದ ವರ್ತಿಸಿದ ರೀತಿ ಇದಕ್ಕೆ ಸಾಕ್ಷಿ ಎಂದು ನುಡಿದರು. ಸಮರ್ಥ ನಾಯಕ ಮಾತನಾಡುವುದಿಲ್ಲ, ಮಾಡಿ ತೋರಿಸುತ್ತಾನೆ ಎಂದು ಅವರು ನುಡಿದರು.ಸೋನಿಯಾ ಸವಾಲ್ ಜವಾಬ್ ಎಂದಿನಂತಲ್ಲದೆ, ವಿಶಿಷ್ಟ ರೀತಿಯಲ್ಲಿ ಮಾತನಾಡಿದ ಸೋನಿಯಾ, ಇಂದು ಮತದಾರರ ಮುಂದೆ ಹಲವು ಪ್ರಶ್ನೆಗಳನ್ನು ಎತ್ತಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು? ಹಸಿರು ಕ್ರಾಂತಿ, ಸಾಮಾಜಿಕ ಕ್ರಾಂತಿ ನಡೆಸಿದವರು ಯಾರು?, ರೈತರ 71 ಸಾವಿರ ಕೋಟಿ ಸಾಲ ಮನ್ನಾ ಮಾಡಿದವರು ಯಾರು ಎಂದು ಪ್ರಶ್ನೆಹಾಕಿ ಸಭಿಕರ ಬಾಯಲ್ಲಿ ಕಾಂಗ್ರೆಸ್ ಎಂದು ಹೇಳಿಸಿದರು. ಆಕ್ರಮಣಕಾರಿಯಾಗೇ ಮಾತಿಗಿಳಿದ ಸೋನಿಯಾ, ಯುಪಿಎ ಸಾಧನೆಗಳನ್ನು ವಿವರಿಸುತ್ತಾ, ಹಸಿರು ಕ್ರಾಂತಿ, ದಲಿತರಿಗೆ ಸಾಮಾಜಿಕ ಸ್ಥಾನಮಾನ, ರಾಷ್ಟ್ರಕ್ಕೆ ವಿದ್ಯುತ್ಶಕ್ತಿ ಪೂರೈಕೆಗಾಗಿ ಯುಪಿಎ ಸರ್ಕಾರ ಅಣುಒಪ್ಪಂದಕ್ಕೆ ಸಹಿಹಾಕಿದೆ ಎಂದು ನುಡಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟಿರುವುದು ಕಾಂಗ್ರೆಸ್ ಹಾಗೂ ಗ್ರಾಮಗಳಲ್ಲಿ ಕಂಪ್ಯೂಟರ್ ಕನಸನ್ನು ನನಸು ಮಾಡಿರುವ ಖ್ಯಾತಿ ತಮ್ಮ ಪಕ್ಷಕ್ಕೆ ಸಲ್ಲುತ್ತದೆ ಎಂದು ನುಡಿದರು.ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಅರ್.ವಿ. ದೇಶಪಾಂಡೆ, ಬೀದರ್ ಕಾಂಗ್ರೆಸ್ ಅಭ್ಯರ್ಥಿ ಧರ್ಮ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಬಿಜೆಪಿಯ ಮೇಲೆ ಹರಿಹಾಯ್ದರು. |