"ರಾಜ್ಯದ ವಿವಿ ಕುಲಪತಿಗಳ ಜತೆಯಲ್ಲಿ ಯಡಿಯೂರಪ್ಪ ಗೋಲ್ಡನ್ ಚಾರಿಯೆಟ್ ಟ್ರೈನ್ನಲ್ಲಿ ಹಣ ಒಯ್ದು ಹಂಚಿರುವ ಕುರಿತು ತನ್ನ ಬಳಿ ಮಾಹಿತಿ ಇದೆ. ಯಡಿಯೂರಪ್ಪರಿಗೆ ತಾಕತ್ತಿದ್ದರೆ ನನ್ನ ಮೇಲೆ ಮೊಕದ್ದಮೆ ಹೂಡಲಿ" ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ತಾಕತ್ತಿನ ಸವಾಲು ಹಾಕಿದ್ದಾರೆ.
ಇಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಯುಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡರು.
"ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ತಾನೇ ಎಂದು ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ನಾನೇನು ಅವರ ಬಳಿ ಅರ್ಜಿ ಹಿಡಿದು ಹೋಗಿರಲಿಲ್ಲ. ಮಾಜಿ ಸಚಿವ ಅನಂತ್ ಕುಮಾರ್ ಬಳಿ ಐದು ಕೋಟಿ ರೂಪಾಯಿ ಸಾಲ ಮಾಡಿದ್ದೇನೆ. ಈ ಸಾಲವನ್ನು ಅವರ ಮುಖಕ್ಕೆಸೆದು ಜೆಡಿಎಸ್ ಸೇರುತ್ತೇನೆ ಎಂದು ದುಂಬಾಲು ಬಿದ್ದವರು ಅವರೇ" ಎಂದು ಕುಮಾರಸ್ವಾಮಿ ದೂರಿದ್ದಾರೆ.
ಇದೇ ವೇಳೆ ಮತದಾರರು ರಾಜ್ಯದಿಂದ 16 ಜೆಡಿಎಸ್ ಅಭ್ಯರ್ಥಿಗಳನ್ನು ಲೋಕಸಭೆಗೆ ಕಳುಹಿಸಿದರೆ, ಬಳ್ಳಾರಿಯ ಗಣಿಧಣಿಗಳನ್ನು ಕರ್ನಾಟಕದಿಂದ ಖಾಲಿ ಮಾಡಿಸುವುದಾಗಿ ಅವರು ನುಡಿದರು. |