ಕೇಂದ್ರ ಚುನಾವಣಾ ಆಯೋಗ ಹಲ್ಲಿಲ್ಲದ ಹಾವಾಗಿದೆ ಎಂದು ಕಟುವಾಗಿ ಚುನಾವಣಾ ಆಯೋಗವನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇದು ಬಿಜೆಪಿಯ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಅನ್ವಯ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದು. ಇದಕ್ಕೆ ಈ ಎಲ್ಲ ಅಧಿಕಾರ ಕಾನೂನು ಬದ್ಧವಾಗಿಯೇ ಇದೆ. ಆದರೆ ಆಯೋಗ ಮಾತ್ರ ಏನನ್ನೂ ಮಾಡುತ್ತಿಲ್ಲ ಎಂದು ದೂರಿದರು.
ರಾಜ್ಯ ಚುನಾವಣಾ ಆಯೋಗ ಕೇಂದ್ರ ಹೇಳಿದ ಹಾಗೆ ಕೇಳುವ ಪೋಸ್ಟ್ಮನ್ ಕೆಲಸ ಮಾಡುತ್ತಿದೆ. ಇದಕ್ಕೆ ಅದು ಬಿಟ್ಟರೆ ಬೇರೆ ಅಧಿಕಾರ ಇಲ್ಲ ಎಂದರು.
ಜಿಲ್ಲಾ ಮಟ್ಟದಲ್ಲಿಯೂ ಅಧಿಕಾರಿಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರಕ್ಷಣಾಧಿಕಾರಿಗಳಂತೂ ಯಡಿಯೂರಪ್ಪನವರ ಸೇವಕರಾಗಿದ್ದಾರೆ. ಬಿಜೆಪಿಯ ಅಣತಿಯಿಲ್ಲದೇ ಏನನ್ನೂ ಮಾಡುತ್ತಿಲ್ಲ ಎಂದು ಕಟುವಾಗಿ ಟೀಕಿಸಿದ ಬಂಗಾರಪ್ಪ, ಕಾನೂನು ಪ್ರಕಾರ ನಡೆಯುವುದನ್ನು ಅವರು ಕಲಿಯಬೇಕೆಂದರು.
ಸೊರಬದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ತಮ್ಮ 40 ವರ್ಷದ ರಾಜಕೀಯದಲ್ಲಿ ಒಮ್ಮೆ ಕೂಡ ಇಲ್ಲಿ ಪೊಲೀಸ್ ದೂರು ಎಂಬುದು ಇರಲಿಲ್ಲ. ಆದರೆ 9 ತಿಂಗಳಲ್ಲಿ ಇದೀಗ ಗುಂಡು ಹಾರಿಸುವ ಪ್ರಕರಣಗಳು ಆರಂಭಗೊಂಡಿವೆ ಎಂದರು. |