"ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಲಾಗುವುದು. ಇದಕ್ಕೆ ತಪ್ಪಿದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಇದನ್ನು ರಕ್ತದಲ್ಲಿ ಬರೆದು ಕೊಡಲೂ ಸಿದ್ಧ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸ ಮಾತನಾಡಿದ ಅವರು, ರಸ್ತೆ, ವಿದ್ಯುತ್, ಪರಿಶಿಷ್ಟ ಜಾತಿ-ವರ್ಗ ಹಾಗೂ ಅಲ್ಪಸಂಖ್ಯಾತರು, ರೈತರ ಸಮಗ್ರ, ಅಭಿವೃದ್ಧಿ ಆಗಬೇಕೆಂಬ ಆಶಯವನ್ನು ಬಿಜೆಪಿ ಹೊಂದಿದೆ. ಜಾತಿ ರಾಜಕೀಯದ ಬದಲು ಅಭಿವೃದ್ದಿ ಮಂತ್ರವನ್ನು ಪಠಿಸಲಾಗುತ್ತಿದೆ ಎಂದರು.
ಮಾಜಿ ಗೃಹಸಚಿವ ಎಲ್.ಕೆ.ಅಡ್ವಾಣಿ ಆರ್ಎಸ್ಎಸ್ ಗುಲಾಮ ಎಂದು ಟೀಕಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾರವರ ವರ್ತನೆ ಶೋಭೆ ತರುವುದಿಲ್ಲ. ದೇಶದ ಸಂಸ್ಕೃತಿ ಬಗ್ಗೆ ಅರಿವಿಲ್ಲದ ಇವರು ಇಟಲಿಯಲ್ಲಿ ಮನೆಯನ್ನು ಹೊಂದಿದ್ದಾರೆ. ರಾಜ್ಯದ ಎಲ್ಲ ವಿಷಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಗೆ ಹಲವು ನಾಯಕರು ಸೇರುತ್ತಿರುವುದು ರಾಜಕೀಯ ವ್ಯಭಿಚಾರ ಎಂದು ಲೇವಡಿ ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಶಬ್ದದ ಅರ್ಥ ಏನು ಅನ್ನುವುದನ್ನು ಬಿಡಿಸಿ ಹೇಳಬೇಕೆಂದರು. ಇವರ ಮಗ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿ, ಕೊನೆಗೆ ಬಿಜೆಪಿಗೆ ಕೈ ಕೊಟ್ಟ ನಡವಳಿಕೆಯನ್ನು ಏನೆಂದು ಕರೆಯಬೇಕೆಂದು ಪ್ರಶ್ನಿಸಿದರು.
|