ಕಳೆದ ಚುನಾವಣೆಯಲ್ಲಿ ಜನತೆಗೆ ಪ್ರಣಾಳಿಕೆ ಮೂಲಕ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು ಯಾವ ಮುಖವನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆ ಭಗವದ್ಗೀತೆ ಇದ್ದಂತೆ. ಅದನ್ನು ಜಾರಿಗೆ ತರುವುದು ಅಷ್ಟೇ ಮುಖ್ಯ. ಆನ್ಯರ ಮುಂದೆ ವಿಚಾರಗಳನ್ನು ಹೇಳುವಾಗ ನಾಲಿಗೆಯ ಮೇಲೆ ಹಿಡಿ ಇರಬೇಕು ಎಂದರು.
ಕಳೆದ ಚುನಾವಣೆಯಲ್ಲಿ ರೈತರಿಗೆ ಉಚಿತ ವಿದ್ಯುತ್, ಬಡವರಿಗೆ 2 ರೂ.ನಲ್ಲಿ ಅಕ್ಕಿ, ಯುವಕರಿಗೆ ನಿರುದ್ಯೋಗ ಭತ್ಯೆ, ಹೀಗೆ ಅನೇಕ ಆಶ್ವಾಸನೆಗಳನ್ನು ಬಿಜೆಪಿ ನೀಡಿತ್ತು. ಆದರೆ ಒಂದೂ ಕೂಡ ಈಡೇರಿಲ್ಲ ಎಂದು ಟೀಕಿಸಿದರು. ತಾವು ಈ ಹಿಂದೆ ಚುನಾವಣೆಯಲ್ಲಿ 900 ಕೋಟಿ ರೂ. ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದು ಅದು ಕೃತಿಗೆ ಇಳಿದಿದೆ ಎಂದು ಹೇಳಿದರು. ಯಾವುದೇ ಪಕ್ಷಗಳು ಭರವಸೆ ನೀಡುವ ಮೊದಲು ಅದನ್ನು ಈಡೇರಿಸುವ ಬಗ್ಗೆ ಚಿಂತಿಸಬೇಕು ಎಂದವರು ಕಿವಿಮಾತು ಹೇಳಿದರು.
|