ಕಾಂಗ್ರೆಸ್ ಚಿಂತನೆಗೆಳು ಬೇರೆ, ಬಿಜೆಪಿ ಚಿಂತನೆಗಳು ಬೇರೆ, ಎಲ್ಲಾ ಧರ್ಮಗಳನ್ನು ಸಮವಾಗಿ ಕಾಣುವ ಕಾಂಗ್ರೆಸ್ಗೆ ಕರ್ನಾಟಕ ಹಾಗೂ ಇತರ ರಾಷ್ಟ್ರಗಳು ಒಂದೇ. ಕಾಂಗ್ರೆಸ್ ಎಂದಿಗೂ ಬಡವರ ಕೈ ಬಿಡದು ಎಂದು ನುಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಶ್ರೀಮಂತರ ಪಕ್ಷವಾಗಿರುವ ಬಿಜೆಪಿಗೆ ಬಡವರ ಸಂಕಷ್ಟಗಳು ಹೇಗೆ ಅರ್ಥವಾದೀತು ಎಂದು ಪ್ರಶ್ನಿಸಿದ್ದಾರೆ.
ಬೀದರ್ ಹಾಗೂ ಗುಲ್ಬರ್ಗಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪರ ಪ್ರಚಾರ ಭಾಷಣ ಮಾಡಿದ ಕಾಂಗ್ರೆಸ್ನ ಯುವ ನೇತಾರ, ರಾಜ್ಯದಲ್ಲಿ ಬಿಜೆಪಿಯ ಕಾರ್ಯ ವೈಖರಿ ವಿರುದ್ದ ವಾಗ್ದಾಳಿ ನಡೆಸಿದರು. ಸಾವಿರಾರು ಕೋಟಿ ರುಪಾಯಿಗಳನ್ನು ಪಡೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ, ರಾಜ್ಯ ಅಭಿವೃದ್ಧಿ ಬಳಸದಿರುವುದು ದುರದೃಷ್ಟಕರ ಸಂಗತಿ ಎಂದು ದೂರಿದರು. ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲ ರಾಜ್ಯಗಳಲ್ಲಿ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅನೇಕ ಜನಪರ ಯೋಜನೆಗಳನ್ನು ರೂಪಿಸಿರುವಾಗ ಬಿಜೆಪಿಗೇನಾಗಿದೆ ಎಂದು ಕೇಳಿದರು.
ಬಿಜೆಪಿ ಮುಖಂಡರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ಬೇಕಿಲ್ಲ, ಅವರು ಬಡವರನ್ನು ಕೈಬಿಟ್ಟು ಬಹುದೂರ ಸಾಗಿರುವ ಕಾರಣ ಮತದಾರರೇ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ವಿನಂತಿಸಿಕೊಂಡರು.
ಕ್ಷಿಪ್ರ ಭಾಷಣ ಮಾಡಿದ ರಾಹುಲ್, ಗುಲ್ಬಾರ್ಗಾದಲ್ಲಿ, "ಗುಲ್ಬರ್ಗಾ ನಾಗರಿಕರಿಗೆ ನನ್ನ ನಮಸ್ಕಾರಗಳು" ಎಂದು ತನ್ನ ಮಾತನ್ನು ಆರಂಭಿಸಿ ನೆರೆದ ಜನತೆಯಲ್ಲಿ ಪುಳಕ ಹುಟ್ಟಿಸಿದರು. |