ದೇವೇಗೌಡರಿಗೆ ಮಕ್ಕಳ ಮೇಲಿರುವ ಧೃತರಾಷ್ಟ್ರ ಪ್ರೀತಿಯಿಂದಾಗಿ ಇಂದು ರಾಜ್ಯ ಅಪಾಯದ ಮಟ್ಟಕ್ಕೆ ಬಂದು ತಲುಪಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅವರು ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಭದ್ರವಾಗಿ ತಳವೂರಲು ದೇವೇಗೌಡ ಹಾಗೂ ಅವರ ಮಕ್ಕಳ ರಾಜಕೀಯ ಸ್ವಾರ್ಥವೇ ಕಾರಣ ಎಂದ ಅವರು, ಈ ಹಿನ್ನೆಲೆಯಲ್ಲಿ ದೇವೇಗೌಡರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಪಕ್ಷವು ಅಧಿಕಾರಕ್ಕೆ ಬಂದ 10 ತಿಂಗಳು ಆಗಿದೆ. ಅವರ ಸಾಧನೆ ಎಂದರೆ ಅಪರೇಷನ್ ಕಮಲದ ಮೂಲಕ ಅನ್ಯ ಪಕ್ಷಗಳ ಮುಖಂಡರಿಗೆ ಅಧಿಕಾರದ ಅಸೆ-ಅಮಿಷಗಳನ್ನು ಒಡ್ಡಿ ಪಕ್ಷಕ್ಕೆ ಸೆಳೆದುಕೊಂಡಿರುವುದು ಎಂದು ಲೇವಡಿ ಮಾಡಿದರು.
ಆಡ್ವಾಣಿ ಕನಸು ನನಸಾಗದು ಆಡ್ವಾಣಿ ಅವರ ಕನಸು ನನಸಾಗದು ಎಂದು ನುಡಿದ ಸಿದ್ದರಾಮಯ್ಯ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವೇವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಅವರ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಸಿದ್ದರಾಮಯ್ಯ ತನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ನುಡಿದರು.
ಬಿಜೆಪಿ ನಡೆಸಿದ ಅಪರೇಷನ್ ಕಮಲವೇ ಅವರಿಗೆ ಮುಳುವಾಗಲಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿಗಳು, ಈಗಾಗಲೇ ಬಳ್ಳಾರಿ ಸಚಿವರಿಗೆ ಯಡಿಯೂರಪ್ಪ ಬೇಡವಾಗಿದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ಬಿಜೆಪಿ ಉದುರಬಹುದು ಎಂದು ವ್ಯಂಗ್ಯವಾಡಿದರು.
|