ತೃತೀಯ ರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಈ ಸುಳಿವು ಸಿಕ್ಕ ನಂತರವೇ ಕಾಂಗ್ರೆಸ್ ಮತ್ತು ಬಿಜೆಪಿ ಬೀದಿ ಕಾಳಗಕ್ಕಿಳಿದು ಪ್ರಧಾನಿ ಹುದ್ದೆಯ ಘನತೆಯನ್ನು ಮಣ್ಣು ಪಾಲು ಮಾಡಿವೆ. ಈ ಪಕ್ಷಗಳ ನಾಯಕರು ಕೀಳು ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದು ಅವರು ವಿಷಾದಿಸಿದರು.
ತೃತೀಯ ರಂಗ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯುಪಿಎ ಮತ್ತಯ ಎನ್ಡಿಎ ಮಿತ್ರಪಕ್ಷಗಳು ಜಾಗ ಖಾಲಿ ಮಾಡುತ್ತಿವೆ. ಅಧಿಕಾರ ಕೈ ತಪ್ಪುವ ಆತಂಕದಿಂದ ಮನಮೋಹನ್ ಸಿಂಗ್ ಮತ್ತು ಆಡ್ವಾಣಿ ಅವರನ್ನು ಆರ್ಎಸ್ಎಸ್ ಗುಲಾಮ ಎಂದು ನಿಂದಿಸುವ ಮಟ್ಟಕ್ಕೆ ಸೋನಿಯಾ ಗಾಂಧಿ ಇಳಿಯಬಾರದಿತ್ತು ಎಂದರು.
ತೃತೀಯ ರಂಗ ಅಧಿಕಾರಕ್ಕೆ ಬರುತ್ತದೆ ಎಂದೇ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ನಾನು ಆಕಾಂಕ್ಷಿಯಲ್ಲ. ಮಾಯಾವತಿಯಾಗಲಿ ಅವರಿಗೆ ಆನಂದದಿಂದ ಬೆಂಬಲ ನೀಡುತ್ತೇವೆ. ಅಧಿಕಾರಕ್ಕಿಂತ ಪ್ರಣಾಳಿಕೆಯಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನ ನಮಗೆ ಮುಖ್ಯ ಎಂದರು.
ಚುನಾವಣೆ ನಂತರ ಜಾತ್ಯತೀತ ನಿಲುವಿನ ಯಾರು ಬೇಕಾದರೂ ಪ್ರಧಾನಿ ಆಗಲು ಬೆಂಬಲ ನೀಡುತ್ತೇನೆ. ಆದರೆ, ಪ್ರಣಾಳಿಕೆಯಲ್ಲಿನ ಅಂಶಗಳ ಅನುಷ್ಠಾನಕ್ಕೆ ಒತ್ತಡ ಹೇರುವ ಸ್ವಾತಂತ್ರ್ಯ ಉಳಿಸಿಕೊಳ್ಳುತ್ತೇನೆ ಎಂದರು.
|