ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರದ ನಡುವೆ ರಾಜಕೀಯ ಪಕ್ಷಗಳಿಗೆ ಸೇರಿದ ಹಣ, ಹೆಂಡವನ್ನು ವಶಪಡಿಸಿಕೊಳ್ಳುವತ್ತ ಚುನಾವಣಾ ಆಯೋಗ ಮುನ್ನುಗ್ಗಿದ್ದು, ಶನಿವಾರ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರಂ ಸಿಂಗ್ ಅವರಿಗೆ ಸೇರಿದ ಹತ್ತು ಲಕ್ಷ ರೂ.ನಗದು ಹಾಗೂ ನಂಜನಗೂಡಿನ ಸಮೀಪ 43ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ.ಬೀದರಿನಲ್ಲಿ ವಶಪಡಿಸಿಕೊಳ್ಳಲಾದ 10 ಲಕ್ಷ ರು. ನಗದು ಸೇರಿರುವುದು ಗುಲಬರ್ಗಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಸೇರಿದ್ದು, ಅವರ ಕಾರಿನಲ್ಲಿಯೇ ಈ ಹಣ ಸಾಗಿಸಲಾಗುತ್ತಿದ್ದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ವಿದ್ಯಾಶಂಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಹರ್ಷ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 10 ಲಕ್ಷ ರು. ನಗದು ಸಾಗಿಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಚಾಲಕ ಪರಾರಿಯಾಗಿದ್ದಾನೆ. ವಿಚಾರಣೆಯಲ್ಲಿ ನಗದು ಸೇರಿರುವುದು ಧರಂಸಿಂಗ್ ಅವರಿಗೆ ಎಂಬ ಸಂಗತಿಯನ್ನು ಬಂಧಿತರು ಬಹಿರಂಗಪಡಿಸಿದ್ದಾರೆ.ನಗದನ್ನು ಕವರುಗಳಲ್ಲಿ ಇಡಲಾಗಿತ್ತು ಮತ್ತು ಕವರಿನ ಮೇಲೆ ತಪುಪಿಸಬೇಕಾದವರ ಹೆಸರು ಕೂಡ ನಮೂದಿಸಲಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.43 ಲಕ್ಷ ರು. ನಗದು ವಶ : ಮತ್ತೊಂದು ಘಟನೆಯಲ್ಲಿ ನಂಜನಗೂಡಿನ ಬಳಿ ಕೇರಳ ಮೂಲದ ವ್ಯಕ್ತಿಯಿಂದ ದಾಖಲೆಯಿಲ್ಲದ 43 ಲಕ್ಷ ರು. ನಗದನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. |