ರಾಜ್ಯದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನಬಂದಂತೆ ಮಾತನಾಡಿರುವುದಕ್ಕೆ ಈ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನೀಡಿದ್ದರು ಕೂಡ ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಲ್ಲ ಎಂಬ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟ ವಿಚಾರಗಳನ್ನು ಇಟ್ಟುಕೊಂಡು, ನಿಖರವಾದ ಅಂಕಿ-ಅಂಶಗಳಿಲ್ಲದೆ ಮಾತನಾಡುವುದು ಸರಿಯಲ್ಲ. ನಮ್ಮನ್ನು ಕೇಳಿದ್ದರೆ ನಾವೇ ಸರಿಯಾದ ಅಂಕಿ-ಅಂಶ ನೀಡುತ್ತಿದ್ದೇವೆ, ಆ ನಿಟ್ಟಿನಲ್ಲಿ ರಾಹುಲ್ ಮನಬಂದಂತೆ ಮಾತನಾಡುವುದು ಒಳ್ಳೆ ಬೆಳವಣಿಗೆ ಅಲ್ಲ ಎಂದರು.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಅವರ ಸ್ವಂತ ನಿವಾಸದಲ್ಲಿ ಮಾಜಿ ಸಚಿವ ಡಿ.ಟಿ.ಜಯಕುಮಾರ್, ಚಿತ್ರನಟಿ ವನಿತಾವಾಸು ಸೇರಿದಂತೆ ಹಲವು ಮುಖಂಡರ ಬಿಜೆಪಿ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯಗಳ ಬಗ್ಗೆ ಬಿಜೆಪಿ ಈಗಾಗಲೇ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಕೇಂದ್ರದಿಂದ ಆಗಿರುವ ಅನ್ಯಾಯಗಳಿಗೆ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಬಿಜೆಪಿ ಪರವಾದ ಫಲಿತಾಂಶ ನೀಡುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. |