ಪ್ರಥಮ ಹಂತದ ಚುನಾವಣೆ ನಡೆಯಲಿರುವ ರಾಜ್ಯದ 17ಲೋಕಸಭೆ ಕ್ಷೇತ್ರಗಳಲ್ಲಿನ ಪ್ರಚಾರ ಕಾರ್ಯಕ್ಕೆ ಮಂಗಳವಾರ ತೆರೆ ಬೀಳಲಿದ್ದು, ಚುನಾವಣಾ ಆಯೋಗ ಅಂತಿಮ ಸಿದ್ದತೆಯಲ್ಲಿ ತೊಡಗಿದೆ.
ಪ್ರಥಮ ಹಂತದಲ್ಲಿ ಸುಮಾರು 2.58ಕೋಟಿ ಮತದಾರರು 271 ಅಭ್ಯರ್ಥಿಗಳ 'ಹಣೆಬರಹ' ನಿರ್ಧರಿಸಲಿದ್ದಾರೆ. ಇದಕ್ಕಾಗಿ 28, 500ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸಿದ್ದಪಡಿಸಲಾಗಿದೆ.
17ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಸಂಜೆ 5ಗಂಟೆಗೆ ಪ್ರಚಾರ ಕಾರ್ಯ ಕೊನೆಗೊಳ್ಳಲಿದೆ. ನಂತರ ಯಾವುದೇ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕೂಡ ಮಂಗಳವಾರ ಸಂಜೆ 5ಗಂಟೆಗೆ ತಮ್ಮ ಕ್ಷೇತ್ರದಿಂದ ನಿರ್ಗಮಿಸಲು ಆಯೋಗ ಸೂಚನೆ ನೀಡಿದೆ.
ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಇರುವುದು ಕೂಡ ಈ ಬಾರಿ ಚುನಾವಣಾ ವಿಶೇಷವಾಗಿದೆ.
ಬುಧವಾರ ಸಂಜೆ ಮತದಾನ ಕೇಂದ್ರದ ಸಿಬ್ಬಂದಿ ಜಿಲ್ಲಾ ಕೇಂದ್ರಗಳಿಂದ ಮತಯಂತ್ರಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯುತ್ತಾರೆ. ಗುರುವಾರ(ಏ.23) ಬೆಳಿಗೆಗ್ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ.
ಪ್ರಥಮ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳು: ಚಿಕ್ಕೋಡಿ, ಬೆಳಗಾವಿ, ವಿಜಾಪುರ (ಪ.ಜಾ), ಗುಲ್ಬರ್ಗಾ(ಪ.ಜಾ), ರಾಯಚೂರು (ಪ.ಪಂ), ಬೀದರ್, ಕೊಪ್ಪಳ, ಬಳ್ಳಾರಿ (ಪ.ಜಾ), ಉತ್ತರ ಕನ್ನಡ, ಚಿತ್ರದುರ್ಗ (ಪ.ಜಾ), ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ (ಪ.ಜಾ) ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. |