ಚುನಾವಣಾ ಪ್ರಚಾರದ ಭರಾಟೆಯಲ್ಲಿ ಕಡಿ, ಕೊಲ್ಲು, ಕೊಚ್ಚು, ತಿಥಿ ಮಾಡುತ್ತೇವೆ ಎಂಬ ಹೇಳಿಕೆ ಕೊಡುತ್ತಿರುವ ರಾಜಕಾರಣಿಗಳಿಗೆ ಮಾದರಿಯಾಗುವಂಥ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತೋರುವ ಮೂಲಕ ಶ್ಲಾಘನೆಗೆ ಒಳಗಾಗಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ವಿರುದ್ಧ ಕೃಷ್ಣ ವ್ಯಂಗ್ಯಭರಿತ ಟೀಕಾಸ್ತ್ರ ಪ್ರಯೋಗಿಸಿದ್ದರು. ತಾವು ಆಡಿದ ಮಾತು ಸರಿಯಲ್ಲ ಎಂದು ಮನವರಿಕೆಯಾಗಿ ಗೌಡರ ಕ್ಷಮೆ ಯಾಚಿಸುವ ಮೂಲಕ ಕೃಷ್ಣ ತಮ್ಮ ಘನತೆಯನ್ನು ಎತ್ತಿ ಹಿಡಿದಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಶನಿವಾರ ಭಾಗವಹಿಸಿದ್ದ ಕೃಷ್ಣ ಬಿಜೆಪಿಯ ಸದಾನಂದ ಗೌಡರು ಸದಾ 32 ಹಲ್ಲುಗಳನ್ನು ಗಿಂಜುತ್ತ ಇರುತ್ತಾರೆ ಎಂದಿದ್ದರು. ಮರುದಿನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಗಮನಿಸಿ, ಕೊಟ್ಟ ಹೇಳಿಕೆ ಬಗ್ಗೆ ಬೇಸರವಾಯಿತು. ತಾವು ಆ ರೀತಿ ಮಾತನಾಡಬಾರದಿತ್ತು ಎಂದು ಮನವರಿಕೆ ಆಯಿತು. ತಡಮಾಡದೆ ಸದಾನಂದ ಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸಿ 'ನಿಮ್ಮ ಬಗ್ಗೆ ನಾನು ಆ ರೀತಿ ಮಾತನಾಡಬಾರದಿತ್ತು. ಅದು ನನ್ನ ಘನತೆಗೆ ತಕ್ಕುದಾಗಿರಲಿಲ್ಲ' ಎಂದು ತಿಳಿಸಿದ್ದರು. ಸದಾನಂದ ಗೌಡ ಸದಾ ನಗುತ್ತಿರುತ್ತಾರೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ಬಾಯಿ ತಪ್ಪಿ ಹಲ್ಲು ಗಿಂಜುತ್ತೀರಿ ಎಂದಿದ್ದೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ಕ್ಷಮೆ ಕೋರುವ ಪತ್ರವನ್ನು ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದಾಗ, ಸದಾನಂದ ಗೌಡರು ನಗುತ್ತ ಪತ್ರ ಬರೆಯುವ ಅವಶ್ಯಕತೆಯಿಲ್ಲ ಎಂದರು. |