ಮತಾಂತರ ಎಂಬುದು ಖಂಡಿತವಾಗಿಯೂ ದೇಶದ ಸಮಸ್ಯೆಯಲ್ಲ. ಅದು ಹಿಂದುತ್ವದ ಒಳಗಿನ ಸಮಸ್ಯೆ. ರಾಜಕಾರಣಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ(ಮತಾಂತರ) ಮಾಡಬಹುದಾದರೆ, ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟ ಧರ್ಮಕ್ಕೆ ಯಾಕೆ ಮತಾಂತರ ಆಗಬಾರದು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.ಕೋಮುವಾದಿಗಳು ಮತಾಂತರ ಸಮಸ್ಯೆಯನ್ನು ಸಂಸ್ಕೃತಿಯ ಮತ್ತು ಧಾರ್ಮಿಕ ಸ್ವಾಭಿಮಾನದ ಸಮಸ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.1992 ರಲ್ಲಿ ಮಂದಿರ-ಮಸೀದಿ ವಿವಾದದ ಸಂದರ್ಭದಲ್ಲಿಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. ಅಂದು ದೇಶವನ್ನು ಕಿತ್ತು ತಿನ್ನುವ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ಮಂದಿರ ನಿರ್ಮಾಣವೇ ದೊಡ್ಡದು ಎಂಬಂತೆ ಬಿಂಬಿಸಲಾಗಿತ್ತು. ಅದರಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದರು. ಇದೀಗ ಮತಾಂತರ ಅಂತಹ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಹೇಳಿದರು.ಮತಾಂತರದಿಂದ ಸಮಾನತೆಯ ಹೋರಾಟ ಶಕ್ತಿ ಕ್ಷೀಣಿಸುತ್ತಿದೆ. ಸಮಾನತೆಯ ಹೋರಾಟ ಅಂದರೆ ಅದು ಸಮಾಜದ ಹೋರಾಟ. ಆದರೆ, ಮತಾಂತರ ಎಂಬ ಅನಗತ್ಯ ವಿವಾದದಿಂದ ಅದು ಗೌಣವಾಗುತ್ತಿದೆ ಎಂದು ತಿಳಿಸಿದರು. |