ಬಿಜೆಪಿ ನೇತೃತ್ವದ ಎನ್ಡಿಎಗೆ ಮತದಾರರು ಆಶೀರ್ವಾದ ಮಾಡಿದಲ್ಲಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಭರವಸೆ ನೀಡಿದ್ದಾರೆ.
ಅವರು ಸೋಮವಾರ ಗುಲ್ಬರ್ಗದ ಎಸ್.ವಿ.ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ರೇವೂ ನಾಯಕ ಬೆಳಮಗಿ ಪರ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೇವೂ ನಾಯಕ್ ಬೆಳಮಗಿ ಅವರು ಸಚಿವ ಸ್ಥಾನ ತ್ಯಜಿಸಿ ಸಂಸತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರಿಗೆ ಮತ ನೀಡಿ ಆರಿಸಬೇಕೆಂದು ಈ ಸಂದರ್ಭದಲ್ಲಿ ಆಡ್ವಾಣಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ಆಂಧ್ರಪ್ರದೇಶದಲ್ಲಿ ಚೆನ್ನಾ ರೆಡ್ಡಿ ಹಾಗೂ ಮಹಾರಾಷ್ಟ್ರದಲ್ಲಿ ವಸಂತರಾವ್ ಪಾಟೀಲ್ ಅವರ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಆಗಿನ ಕೇಂದ್ರ ಸರ್ಕಾರ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು ತೆಲಂಗಾಣ ಮತ್ತು ವಿದರ್ಭ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿತ್ತು. ಆಗ ಕರ್ನಾಟಕ ಹೈದರಬಾದ್ ಕರ್ನಾಟಕದ ಕೈಬಿಟ್ಟು ಹೋಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಲ್ಲಿ ಈ ವಿಧಿಗೆ ತಿದ್ದುಪಡಿ ತರುವ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದರು.
20ನೇ ಶತಮಾನ ಅಮೆರಿಕ, ರಷ್ಯಾ ಮತ್ತು ಇತರ ದೇಶಗಳದ್ದಾಗಿರಬಹುದು. ಆದರೆ 21ನೇ ಶತಮಾನವಂತೂ ನಿಶ್ಚಿತವಾಗಿ ಭಾರತದ ಶತಮಾನ ಆಗಲಿದೆ ಎಂದು ಭವಿಷ್ಯ ನುಡಿದರು. |