ರಾಜ್ಯದಲ್ಲಿ ಪ್ರಥಮ ಹಂತದ ಚುನಾವಣಾ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ನಾಯಕರ ವಾಗ್ದಾಳಿ ಮುಂದುವರಿದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಬುಡಬುಡಕಿ ದಾಸ ಎಂದು ಜರೆದಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಕೊಂದ ಪಾಪಿ ಎಂದು ಕಿಡಿಕಾರಿದ್ದಾರೆ.ಲೋಕಸಭಾ ಚುನಾವಣೆ ಅಂಗವಾಗಿ ಸೋಮವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ರೆಡ್ಡಿ ಸಹೋದರರು ರಾಜಕೀಯ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಎರಡು ರೂಪಾಯಿಗೆ ಅಕ್ಕಿ, 24ಗಂಟೆ ವಿದ್ಯುತ್ ನೀಡುವ ಮಾತು ಎಲ್ಲಿಗೆ ಹೋಯಿತು. ಸ್ವಂತ ವರ್ಚಸ್ಸು ಇಲ್ಲದ ಅವರು ವ್ಯಾಪಾರದ ಮೂಲಕ ಪ್ರಭಾವಿಗಳನ್ನೂ ಸೆಳೆದು ಅಧಿಕಾರ ನಡೆಸುತ್ತಿದ್ದಾರೆ. ಸ್ವಂತಿಕೆ ಇಲ್ಲದ ಕೆಲವು ರಾಜಕಾರಣಿಗಳು ಅಧಿಕಾರದ ಆಸೆಯಿಂದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಸಿ ಬಳಿಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಎನ್ಡಿಎ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕೋಮುಗಲಭೆ ನಡೆದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೆ, ದೇಶದಲ್ಲಿ ಕೋಮು ದಳ್ಳುರಿ ಮಿತಿಮೀರಲಿದೆ ಎಂದರು. |