ರಾಜ್ಯದಲ್ಲಿ ಪ್ರಥಮ ಹಂತದ ಲೋಕಸಭಾ ಚುನಾವಣೆಯ ಮತ ಪ್ರಚಾರಕ್ಕೆ ಮಂಗಳವಾರ ಸಂಜೆ ಅಂತಿಮ ತೆರೆ ಬೀಳುವುದರೊಂದಿಗೆ, ಏ.23ರಂದು ನಡೆಯುವ 17ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದರೆ, ಮುಕ್ತ ಮತ್ತು ನಿಷ್ಪಕ್ಷಪಾತ, ಶಾಂತಿಯುತ ಚುನಾವಣೆ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಏ.23ರಂದು ಹಾಗೂ ಏ.30ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ 55ಮಂದಿ ಎಸ್ಪಿಗಳು, 175ಡಿವೈಎಸ್ಪಿ, 525 ಇನ್ಸ್ಪೆಕ್ಟರ್, 3,500ಸಬ್ ಇನ್ಸ್ಪೆಕ್ಟರ್, ರಾಜ್ಯ ಮೀಸಲು ಪಡೆಯ 135, ಡಿಎಆರ್, ಸಿಎಆರ್, ಗೃಹರಕ್ಷಕ ದಳ ಸೇರಿದಂತೆ ಭದ್ರತೆಗಾಗಿಯೇ 62ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ರಾಜ್ಯದ ಪೊಲೀಸರಲ್ಲದೆ ನೆರೆಯ ಆಂಧ್ರ, ತಮಿಳುನಾಡು ಹಾಗೂ ಕೇರಳದ ಸ್ಪೆಷಲ್ ಆರ್ಮಡ್ ಪೊಲೀಸರನ್ನು ಎರಡು ಹಂತದ ಮತದಾನಕ್ಕೆ ಒದಗಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶವಾಗಿರುವ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದರು.
ಮತದಾನ ನಡೆಯುವ ವೇಳೆ ಪೊಲೀಸ್ ಅಧಿಕಾರಿಗಳನ್ನೊಳಗೊಂಡ 2016 ಪೊಲೀಸ್ ತಂಡಗಳು ಸಂಚರಿಸಲಿದ್ದು, ಜೊತೆಗೆ 2616 ಪೊಲೀಸ್ ವಾಹನಗಳು ಗಸ್ತು ತಿರುಗಿ, ಎಲ್ಲೆಡೆ ಕಟ್ಟೆಚ್ಚರ ವಹಿಸಲಿದೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು. |