ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ಗಡಿ ವಿವಾದಕ್ಕೆ ಕಾರಣವಾಗಿದ್ದ ಓಬಳಾಪುರಂ ಗಣಿಗಾರಿಕೆ ಪ್ರದೇಶದ ಬಗ್ಗೆ ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.ಬಳ್ಳಾರಿ ಗಣಿ ಕುಳ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪೆನಿ ಆಂಧ್ರಪ್ರದೇಶದಿಂದ ಗಣಿಗಾರಿಕೆಗೆ ಪರವಾನಿಗೆ ಪಡೆದು ಕರ್ನಾಟಕದ ಗಡಿಯನ್ನು ಒತ್ತುವರಿ ಮಾಡಿಕೊಂಡು ತಮಗೆ ಸೇರಿದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಬಳ್ಳಾರಿಯ ನಾರಾಯಣರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಮತ್ತು ನ್ಯಾ.ವಿ.ಜಿ.ಸಭಾಹಿತ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.ಕೇಂದ್ರ ಸರ್ಕಾರದ ಇಂಡಿಯನ್ ಬ್ಯುರೋ ಆಫ್ ಮೈನ್ಸ್ ಮತ್ತು ಸರ್ವೇ ಆಫ್ ಇಂಡಿಯಾದ ನಿರ್ದೇಶಕರಿಂದ ಜಂಟಿ ಸಮೀಕ್ಷೆ ನಡೆಸಬೇಕು. ಈ ಬಗ್ಗೆ ಇಂಡಿಯನ್ ಬ್ಯುರೋ ಆಫ್ ಮೈನ್ಸ್ನ ಕರ್ನಾಟಕ ಮತ್ತು ಆಂಧ್ರಪ್ರದೇಶ ವಿಭಾಗಗಳಿಗೆ ಮಾಹಿತಿ ನೀಡಬೇಕು. ತುಮಟಿ ಐರನ್ ಓರ್ ಕಂಪೆನಿ ಮಾಲೀಕ ನಾರಾಯಣ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪೆನಿಯ ಮುಖ್ಯಸ್ಥರ ನೇತೃತ್ವದಲ್ಲಿ ಈ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಪೀಠ ತಿಳಿಸಿದೆ.ಜೂನ್ 8ರೊಳಗೆ ಸಮೀಕ್ಷಾ ವರದಿ ಹೈಕೋರ್ಟ್ಗೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ಸಂಡೂರು ತಾಲೂಕಿನ ತುಮಟಿಯ ವಿವಾದವಿಲ್ಲದ ಸರ್ವೇ ನಂ.1ರ 11ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ಅದಿರನ್ನು ಸಾಗಣೆ ಮಾಡಲು ನಾರಾಯಣ ರೆಡ್ಡಿಗೆ ಅವಕಾಶ ನೀಡಬೇಕೆಂದು ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. |