ತೃತೀಯ ರಂಗವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚುನಾವನೆ ಬಳಿಕ ತೃತೀಯ ರಂಗದ ಮುಖಂಡರ ಮನೆ ಬಾಗಿಲು ಕಾಯುವ ಪರಿಸ್ಥಿತಿ ಬರಲಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ತೃತೀಯ ರಂಗದ ಬಗ್ಗೆ ಅಜಾದ್ ಟೀಕಿಸುವ ಮೊದಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸ್ಥಿತಿ ಬಗ್ಗೆ ಚಿಂತನೆ ಮಾಡುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.
ತೃತೀಯ ರಂಗದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಆಯಾ ರಾಜ್ಯಗಳಲ್ಲಿ ಅಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದಲ್ಲಿ ಜೆಡಿಎಸ್ ಬಲವಿಲ್ಲ ಎಂದು ವಿರೋಧ ಪಕ್ಷಗಳು ವ್ಯಂಗ್ಯವಾಡುತ್ತಿವೆ. ಆದರೆ ಜೆಡಿಎಸ್ ಶಕ್ತಿ ಏನೆಂಬುದು ಚುನಾವಣೆ ಬಳಿಕ ತೋರಿಸಲಿದೆ ಎಂದು ಸವಾಲು ಹಾಕಿದರು.
ಸಚಿವನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದೇನೆ. ರಕ್ಷಣಾ ಇಲಾಖೆಯ ಮನವೊಲಿಸಿ ನಗರದ ರಸ್ತೆಗಳ ಅಗಲೀಕರಣ ಮಾಡಲಾಗಿದೆ ಎಂದು ಯೋಜನೆಗಳ ಕುರಿತು ವಿವರಿಸಿದರು. |