ಲೋಕಸಭೆಯಲ್ಲಿ ಕನ್ನಡದ ಡಿಂಡಿಮ ಬಾರಿಸಲು ಕಡೆಯ ಪಕ್ಷ ನಾವು ಕನ್ನಡದ ಬಗ್ಗೆ ಹೋರಾಟ, ಗದ್ದಲ ಮಾಡುವುದನ್ನು ನೋಡಿ ಮಜಾ ಮಾಡಲಾದರೂ ಕನ್ನಡ ಚಳವಳಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮತದಾರರಲ್ಲಿ ಮನವಿ ಮಾಡಿದರು.ಇಂದು ನಾಯಿ, ನರಿಗಳೆಲ್ಲ ಮಂತ್ರಿಗಳಾಗಿದ್ದಾರೆ. ಅವರಿಗಿಂತ ನಾವು ಕಡೇನಾ?ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಎಂದಿನಂತೆ ಹಾಸ್ಯಮಿಶ್ರಿತ ಶೈಲಿಯಲ್ಲಿ ಟೀಕಾಪ್ರಹಾರ ನಡೆಸಿದರು.15-20 ವರ್ಷಗಳಿಂದ ಲೋಕಸಭೆಯಲ್ಲಿದ್ದಾರೆ, ಲೋಕಸಭೆಯಲ್ಲಿ ಅವರ ಮುಖ ನೋಡಿಲ್ಲ, ಗದ್ದಲ ಕೇಳೆ ಇಲ್ಲ, ಓಟು ಹಾಕಿ ಬೆಂಗಳೂರನ್ನು ಭೂಲೋಕದಿಂದ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಡೋಂಗಿತನ ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಮತದಾರರು ಮರುಳಾಗಬೇಡಿ ಎಂದರು.ಕನ್ನಡ, ಕರ್ನಾಟಕ ನೆಲ, ಜಲದ ಬಗ್ಗೆ ಹೋರಾಡಲು ನಮ್ಮನ್ನು ಆಶೀರ್ವದಿಸಿ, ಸದಾ ನಾವು ನಿಮ್ಮ ರಸ್ತೆ, ಬೀದಿಬದಿಯಲ್ಲಿ ಸಿಗುತ್ತೇವೆ ಎಂದು ಅವರು ಮನವಿ ಮಾಡಿದರು. ನಾವು ಸೋಲಲು ಕೂಡ ತಯಾರಾಗಿದ್ದೇವೆ, ಆದರೆ ನಾವು ಸೋತರೇ ಕನ್ನಡಿಗರಿಗೆ ಕ್ಷೇತ್ರದ ಮತದಾರರಿಗೆ ಅವಮಾನ. ನಿಮ್ಮ ಪರ ಹೋರಾಡಲು ಯಾರೂ ಇರುವುದಿಲ್ಲ ಅದಕ್ಕಾಗಿ ನಿಮ್ಮ ಸಮಸ್ಯೆಗಳಿಗೆ ಹೋರಾಡಲಾದರೂ ನಮಗೆ ಮತ ನೀಡಿ ಎಂದರು. |