ರಾಜ್ಯದ 17ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಿಗ್ಗೆ ಮತದಾನ ಆರಂಭಗೊಂಡಿದ್ದು, 10ಗಂಟೆಯವರೆಗೆ ಒಟ್ಟು ಶೇ.12ದಷ್ಟು ಮತದಾನವಾಗಿದ್ದು, ಘಟಾನುಘಟಿಗಳಾದ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ರೇವೂನಾಯಕ್ ಬೆಳಮಗಿ, ಮಾರ್ಗರೇಟ್ ಆಳ್ವ ಸೇರಿದಂತೆ ಹಲವರು ಮತ ಚಲಾಯಿಸಿದರು.
ಬಳ್ಳಾರಿಯಲ್ಲಿ ಈವರೆಗೆ ಅತಿ ಹೆಚ್ಚು ಮತದಾನವಾಗಿದ್ದು, ರಾಯಚೂರು ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಬೆಳಿಗ್ಗೆ 10ಗಂಟೆಯವರೆಗೆ ಬೆಂಗಳೂರು ಉತ್ತರ-ಶೇ.16, ಚಿಕ್ಕಬಳ್ಳಾಪುರ-ಶೇ.17, ಬೆಳಗಾವಿ-ಶೇ.12, ಬಿಜಾಪುರ-ಶೇ.13, ತುಮಕೂರು-ಶೇ.11, ಚಿಕ್ಕೋಡಿ-ಶೇ.11, ಗುಲ್ಬರ್ಗಾ-ಶೇ.16, ಬೀದರ್-ಶೇ.10, ಬಳ್ಳಾರಿ-ಶೇ.20, ಉತ್ತರಕನ್ನಡ-ಶೇ.12, ಬೆಂಗಳೂರು ಗ್ರಾಮಾಂತರ-ಶೇ.13, ಕೋಲಾರ-ಶೇ.16, ಬೆಂಗಳೂರು ಕೇಂದ್ರ-ಶೇ.11ರಷ್ಟು ಮತದಾನವಾಗಿದೆ.
ಪ್ರಜ್ಞಾವಂತರ ಮತದಾರ ಕ್ಷೇತ್ರವೆಂದೆ ಖ್ಯಾತಿ ಹೊಂದಿರುವ ಬೆಂಗಳೂರು ದಕ್ಷಿಣ ಹಾಗೂ ಚಿಕ್ಕೋಡಿಯಲ್ಲಿ ಮತದಾನ ಆರಂಭವಾದ ಸಂದರ್ಭದಲ್ಲಿ ಅತಿ ಕಡಿಮೆ ಅಂದರೆ ಶೇ.5 ರಷ್ಟು ಮತದಾನ ದಾಖಲಾಗಿದೆ. ಉಳಿದಂತೆ ಶಾಂತಿಯುತ ಮತದಾನ ನಡೆಯುತ್ತಿದೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ ಬಗ್ಗೆ ವರದಿ ಬಂದಿದೆ. ಸುಮಾರು 500 ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಇದರಿಂದ ನಾಗರಿಕರು ಆಕ್ರೋಶಗೊಂಡಿದ್ದು, ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವಾರಣ ಕಂಡು ಬಂದಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ತಿಳಿಗೊಳಿಸಿದರು. |