ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ಗೆ ಕೇಂದ್ರದ ವ್ಯವಸ್ಥಿತ ಪಿತೂರಿಯೇ ಕಾರಣ. ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನಾನು, ರೈತರನ್ನು ಕೊಲ್ಲುವಷ್ಟು ಕಟುಕನಲ್ಲ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ನಗರದ ಮೈಲಾರ ಮಹಾದೇವ ಸಭಾಭವನದಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯಗಳಿಗೆ ಅವಶ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ, ರಾಜ್ಯಕ್ಕೆ ಅಗತ್ಯವಿರುವಷ್ಟು ಗೊಬ್ಬರ ನೀಡದೆ ನನ್ನ ಮೇಲೆ ವ್ಯವಸ್ಥಿತವಾಗಿ ಆರೋಪ ಮಾಡಲಾಗುತ್ತಿದೆ. ಆದರೂ ಇದು ನನ್ನ ಜೀವನದಲ್ಲಿಯೇ ಮರೆಯಲಾರದ ಘಟನೆ. ಈ ಬಗ್ಗೆ ಈಗಲೂ ನನ್ನಲ್ಲಿ ನೋವು ಕಾಡುತ್ತಿದೆ ಎಂದರು. |