ಲೋಕಸಭಾ ಚುನಾವಣೆಯ ಎರಡನೇ ಹಂತದ ಮತಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಶಾಸಕ ಸಂಗಮೇಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಬಂಗಾರಪ್ಪ ಮೇಲೆ ಕಲ್ಲೆಸೆದ ಘಟನೆ ಭದ್ರಾವತಿಯಲ್ಲಿ ಗುರುವಾರ ನಡೆದಿದೆ.
ಭದ್ರಾವತಿಯಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಶಾಸಕ ಸಂಗಮೇಶ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಬಾರದು, ಅವರ ಕಾಂಗ್ರೆಸ್ನಲ್ಲೇ ಇದ್ದು ಬಿಜೆಪಿ ಪರ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿ ಬಂಗಾರಪ್ಪ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದಾಗ, ಸಂಗಮೇಶ್ ಬೆಂಬಲಿಗರು ಕೈ ಮಿಲಾಯಿಸಲು ಮುಂದಾದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಬಂಗಾರಪ್ಪ ಅವರ ಮೇಲೆ ಕಲ್ಲು ತೂರಿದ ಪರಿಣಾಮ ಕಲ್ಲು ಅವರ ಎದೆಗೆ ತಾಗಿದ್ದು, ತಕ್ಷಣವೇ ಭಾಷಣ ನಿಲ್ಲಿಸಿ ಅಲ್ಲಿಂದ ನಿರ್ಗಮಿಸಿದರು.
ಬೆಂಬಲಿಗರ ನಡುವಿನ ಹೊಯ್ ಕೈ ನೋಡಿ, ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡ ಸಭೆಯಲ್ಲಿ ಭಾಗವಹಿಸದೆ ತೀರ್ಥಹಳ್ಳಿಗೆ ವಾಪಸಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದು, ಮೂವರು ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪತ್ರಕರ್ತರೊಬ್ಬರ ಕಾಲು ಮುರಿದಿದ್ದು, ಕಾಳ್ತುಳಿತದಿಂದಾಗಿ ಮಹಿಯೊಬ್ಬರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿತ್ತು, ಬಂಗಾರಪ್ಪ ಮತ್ತು ಸಂಗಮೇಶ್ ಬೆಂಬಲಿಗರು ಗುಂಪುಗೂಡಿ ಘರ್ಷಣೆಗೆ ಇಳಿದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಪೊಲೀಸರು ಮುಂದಾಗಿರುವುದಾಗಿ ಹೇಳಿದ್ದಾರೆ. |